ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಎನ್ನಿಸಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ, ಅಂದರೆ, ಮುಂದಿನ ಮುಖ್ಯಮಂತ್ರಿ ಅಂತ ಘೋಷಿತರಾಗಿದ್ದಾರೆ.
1990 ರಲ್ಲಿ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಅಂದಿನ ಪ್ರಧಾನಿ ರಾಜೀವ್ಗಾಂಧಿ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಿದ ಘಟನೆ ಈ ಸಂದರ್ಭ ನೆನಪಿಸುತ್ತದೆ ಎಂಬ ಅಭಿಪ್ರಾಯವನ್ನು ಬಹಳಜನ ವ್ಯಕ್ತಪಡಿಸಿದ್ದಾರೆ.
ಅಸಲಿಗೆ ಅಂದು ಏನಾಗಿತ್ತು?
ವೀರೇಂದ್ರ ಪಾಟೀಲರಿಗೆ ತೀವ್ರ ಅನಾರೋಗ್ಯವಿತ್ತು. ಆಸ್ಪತ್ರೆ-ಮನೆ ಅಲೆದಾಟ ನಡೆದಿತ್ತು. ಪಾರ್ಶ್ವವಾಯು ಹಣ್ಣಾಗಿಸಿತ್ತು. ಇವರ ಆರೋಗ್ಯ ವಿಚಾರಿಸಲು ಅಂದಿನ ಪ್ರಧಾನಿ ರಾಜೀವ್ಗಾಂಧಿ ಖುದ್ದು ಬೆಂಗಳೂರಿಗೆ ಬಂದುಬಿಟ್ಟರು!
ಅದು ಕರ್ನಾಟಕ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿತು.
ವೀರೇಂದ್ರ ಪಾಟೀಲರಿಗೆ ಪ್ರಧಾನಿ ಬಂದಿದ್ದಾರೆಂದು ತಿಳಿಸಲು ವಿಶ್ವಸನೀಯ ವ್ಯಕ್ತಿಯೊಬ್ಬರನ್ನು ಕಳುಹಿಸಲಾಯಿತು. ಆದರೆ ಮುಖ್ಯಮಂತ್ರಿ ಪಾಟೀಲರ ಮನೆಯಲ್ಲಿ ಕಂಡಿದ್ದೇನು? ಮುಂಬಾಗಿಲಿಗೆ ಬೀಗ!
ಒಳಗಡೆ ಪಾಟೀಲರು ಇದ್ದರು.
ಪಾಟೀಲರು ಹೀಗೆ ಯಾಕೆ ಮಾಡಿದರು? ಮತ್ತೆ ಯಾಕೆ ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುತ್ತಾರೆ ಎಂದು ನಮಗೂ ಅರ್ಥವಾಗಲಿಲ್ಲ ಎನ್ನುತ್ತಾರೆ ಘಟನೆ ವಿವರಿಸಿದ ನಿಕಟವರ್ತಿ ಲೋಕೇಶ್ ಎನ್ನುವ ತೆರೆಮರೆಯ ಹಿರಿಯ ರಾಜಕಾರಣಿಯೊಬ್ಬರು.
ಸಾಲದ್ದಕ್ಕೆ ಪಾಟೀಲರನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್ ಒಬ್ಬರು ಸುಮ್ನಿರಿ ಸುಮ್ನಿರಿ ಎಂದರೂ ಕೇಳದೇ ಇನ್ನು ಆರು ತಿಂಗಳು ಅವರಿಗೆ ಪೂರ್ಣ ವಿಶ್ರಾಂತಿ ಅಗತ್ಯವಿದೆ. ಯಾರೂ ಅವರನ್ನು ಡಿಸ್ಟರ್ಬ್ ಮಾಡದಿರುವುದು ಒಳ್ಳೆಯದು ಎಂದು ಸಾರ್ವಜನಿಕವಾಗಿ ಹೇಳಿಬಿಟ್ಟರು. ಇದು ರಾಜೀವ್ ಗಾಂಧಿ ಅವರ ಕಿವಿಗೆ ಬಿತ್ತು. ಮನೆಗೆ ಹೋದರೆ ಸಿಗದಿರುವ, ಹಾಸಿಗೆ ಹಿಡಿದಿರುವ ವ್ಯಕ್ತಿ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಹೇಗೆ ಆಡಳಿತ ಮಾಡಲು ಸಾಧ್ಯ ಎಂದು ಯೋಚಿಸಿ, ವಿಷಯವನ್ನು ಪಾಟೀಲರ ಮುಂದೆಯೇ ಪ್ರಸ್ತಾಪಿಸಿದರು. ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸಿ ಸಮರ್ಥರನ್ನು ನೇಮಿಸಿ ಆಡಳಿತ ನಿರ್ವಹಿಸುವ ಸಲಹೆ ನೀಡಿದರು. ಅದಕ್ಕೆ ಸಮ್ಮತಿಸಿದ ವೀರೇಂದ್ರ ಪಾಟೀಲರು ಒಂದು ನಿಬಂಧನೆ ಮುಂದಿಟ್ಟರು; ಅದು ನನ್ನ ಆಯ್ಕೆಯೇ ಆಗಬೇಕು ಅಂತ! ಅವರ ಮನಸ್ಸಿನಲ್ಲಿ ಆಗ ಇದ್ದುದು ಕೆ.ಎಚ್. ರಂಗನಾಥ್ ಅವರ ಹೆಸರು. ರಾಜೀವ್ ಗಾಂಧಿಯವರಿಗೆ ಏನನ್ನಿಸಿತೋ ಏನೋ, ಮೌನವಾಗಿ ಹೊರಟುಹೋದರು.
ಮರುದಿನ, ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಗಾದಿಯಿಂದ ಇಳಿಸಲಾಯಿತು.
ಮುಂದಿನ ಮುಖ್ಯಮಂತ್ರಿ ಆಗಿ ಅಧಿಕಾರಕ್ಕೆ ಬಂದವರು ಸಾರೆಕೊಪ್ಪ ಬಂಗಾರಪ್ಪ!
ವೀರೇಂದ್ರ ಪಾಟೀಲರು ರಾಜಕೀಯ ತಂತ್ರಗಾರಿಕೆ ಮಾಡದೇ ತಮ್ಮ ಭವಿಷ್ಯ ಹಾಳುಮಾಡಿಕೊಂಡರು ಎನ್ನುತ್ತಾರೆ ಅವರ ನಿಕಟವರ್ತಿಗಳು.
ಇಂದಿನ ರಾಜಕೀಯ ಸ್ಥಿತ್ಯಂತರ ಸಂಪೂರ್ಣ ಬೇರೆಯದೇ ಆಗಿದೆ. ಇಲ್ಲಿ ಎಷ್ಟು ತಂತ್ರಗಾರಿಕೆ ನಡೆದಿದೆ, ಹಾವು ಏಣಿ ಆಟದಲ್ಲಿ ಯಾರು ಎಷ್ಟು ಸಲ ಏಣಿ ಹತ್ತಿದ್ದಾರೆ, ಯಾರು ಹಾವಿನ ಬಾಯಲ್ಲಿ ಕಚ್ಚಿಸಿಕೊಂಡು ಕೆಳಕ್ಕೆ ಇಳಿದಿದ್ದಾರೆ, ಈಗ ಕೊನೆಯ ಗುರಿ ತಲುಪಿದವರು ಯಾರು ಎಲ್ಲ ಅಯೋಮಯ. ಕಳೆದ ಆರು ತಿಂಗಳಿಂದ ಅಧಿಕಾರ ಹಂಚಿಕೆಯ ಗುಸುಗುಸು ಕೇಳಿಬರುತ್ತಲೇ ಇತ್ತು. ಸ್ವತಃ ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ತಾವೇ ಅಂತ ಪದೇ ಪದೇ ಖಚಿತಪಡಿಸುತ್ತಲೇ ಬಂದಿದ್ದರು. ಅವರ ನಿಷ್ಠರೂ ಹಾಗೇ ಹೇಳುತ್ತಿದ್ದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆಯಲು ಅಪಾರ ಶ್ರಮ ಹಾಕಿದ ಡಿ.ಕೆ.ಶಿವಕುಮಾರ್ ಸುಲಭಕ್ಕೆ ಪಟ್ಟು ಬಿಡದೇ ಹೈಕಮಾಂಡ್ ಮೇಲೆ ಒತ್ತಡ ತರುತ್ತಲೇ ಇದ್ದರು. ವಾಸ್ತವವಾಗಿ ಆರಂಭದಲ್ಲೇ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ನಿರೀಕ್ಷೆ ಹಲವರಲ್ಲಿ ಇತ್ತು. ರಾಹುಲ್ ಗಾಂಧಿ ಇಂದು ಕೈಗೊಂಡ ನಿರ್ಧಾರಕ್ಕೂ ಅಂದು ರಾಜೀವ್ ಗಾಂಧಿ ಕೈಗೊಂಡ ನಿರ್ಧಾರಕ್ಕೂ ಅಜಗಜಾಂತರವಿದೆ.
ಗುರುವಾರ ಸಿದ್ದರಾಮಯ್ಯ ರಾಜೀನಾಮೆ ಪ್ರಕಟಿಸಿದವರು ಮತ್ತೆ ದೆಹಲಿಗೆ ಹಾರಿದ್ಯಾಕೆ? ಆದರೆ ಅವರ ವಿಮಾನ ಎಡಕ್ಕೆ ತಿರುಗಿ ರಾಜಸ್ಥಾನದಲ್ಲಿ ಲ್ಯಾಂಡ್ ಆಗಿದ್ಯಾಕೆ? ಇನ್ನೊಂದೆಡೆ ಡಿ ಕೆ ಶಿವಕುಮಾರ್ ಸಹ ದೆಹಲಿಗೆ ತೆರಳಿದ್ಯಾಕೆ ಎಂಬೆಲ್ಲ ಪ್ರಶ್ನೆಗಳಿವೆ. ಈ ಮಧ್ಯೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಕರ್ನಾಟಕ ಸಿಎಂ ಪಟ್ಟಕ್ಕೆ ಡಿಕೆ ಶಿವಕುಮಾರ್ ಅವರನ್ನು ಬೆಂಬಲಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಡಿಕೆ ಶಿವಕುಮಾರ್ ಅವರನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಿದರೆ, 2028ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದು ಪ್ರಿಯಾಂಕಾ ಗಾಂಧಿ ಅವರ ನಿಲುವು ಎಂದು ಹೇಳಲಾಗಿದೆ.
* ವಿಭ






