ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್. ಆರ್. ರಂಗನಾಥ್ ಎಸ್.ಎಂ.ಕೃಷ್ಣ ಅವರ ಬಹುಮುಖೀ ವ್ಯಕ್ತಿತ್ವದ ಅಪರೂಪದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ..
***
ವರ್ಣರಂಜಿತ ವ್ಯಕ್ತಿತ್ವದ ರಾಜಕಾರಣಿ ಎಸ್.ಎಂ. ಕೃಷ್ಣ ಅವರನ್ನು ಬರಿಯ ರಾಜಕೀಯ ದೃಷ್ಟಿಕೋನದಿಂದ ನೋಡಿದರೆ ಅವರ ವ್ಯಕ್ತಿತ್ವದ ಹಲವು ಮುಖಗಳು ಅರಿವಿಗೆ ಬರದೇ ಇರಬಹುದು. ಈಗಿನ ರಾಜಕಾರಣಿಗಳಿಗೆ ಹೋಲಿಸಿದರೆ ಅವರು ವಜ್ರಗಳಲ್ಲೇ ಅತ್ಯುತ್ತಮ ವಜ್ರ!
* ರಾಮಕೃಷ್ಣಾಶ್ರಮದಂಥ ಸಾಂಪ್ರದಾಯಕ ಸಂಸ್ಥೆಯಲ್ಲಿ ಶಿಕ್ಷಣ ಪಡೆದು, ಉನ್ನತ ಶಿಕ್ಷಣವನ್ನು ಪಾಶ್ಚಾತ್ಯ ವಾತಾವರಣದಲ್ಲಿ (ಅಮೆರಿಕ)ದಲ್ಲಿ ಪಡೆದವರು. ಆರಂಭದಲ್ಲಿ ಇವರನ್ನು ಅಮೆರಿಕ ಕೃಷ್ಣ ಅಂತಲೇ ಇಲ್ಲಿ ಕರೆಯುತ್ತಿದ್ದರು.
* ಮೊದಮೊದಲು ತಮ್ಮ ವಸ್ತ್ರವಿನ್ಯಾಸವನ್ನು ಸ್ವತಃ ಮಾಡಿಕೊಳ್ಳುತ್ತಿದ್ದರು. ಅವರ ವಾರ್ಡ್ರೋಬ್ ಸಂಗ್ರಹ ಬಹಳ ದೊಡ್ಡದಿತ್ತು. ಯಾವ ಸಂದರ್ಭದಲ್ಲಿ ಯಾವ ಬಟ್ಟೆ ಧರಿಸಬೇಕು ಎಂಬ ಬಗ್ಗೆ ಸೂಕ್ಷ್ಮ ಅರಿವಿತ್ತು.
* ವಿದೇಶದಲ್ಲಿ ಓದಿದ್ದರೂ ಭಾರತೀಯ ಕಲೆಗಳ ಬಗ್ಗೆ ಅಪಾರ ಒಲವಿತ್ತು. ವಿಶೇಷವಾಗಿ ಕರ್ನಾಟಕ ಸಂಗೀತ ರಸಗ್ರಹಣ ಶಕ್ತಿ ಬಹಳ ಆಳವಾಗಿತ್ತು. ಅದು ಹೇಗೆ ಸಿದ್ಧಿಸಿತ್ತು ಅಂತ ಅವರಿಗೂ ಗೊತ್ತಿರಲಿಲ್ಲ!
* ರಾಮಕೃಷ್ಣ ಹೆಗಡೆ ಬಿಟ್ಟರೆ, ಸಾಂಸ್ಕೃತಿಕ ಅಭಿರುಚಿ ಹೊಂದಿರುವ ರಾಜಕಾರಣಿ ಎಂದರೆ ಎಸ್.ಎಂ.ಕೃಷ್ಣ. ಅದರ ಜೊತೆ ಕ್ರೀಡೆಯಲ್ಲೂ ಅಪಾರ ಒಲವಿತ್ತು.
* ಟೆನಿಸ್ ಪ್ರಿಯರಾಗಿದ್ದ ಎಸ್.ಎಂ.ಕೃಷ್ಣ ಪ್ರತಿವರ್ಷದ ವಿಂಬಲ್ಡನ್ ಹಾಗೂ ಅಮೆರಿಕನ್ ಓಪನ್ ಟೆನ್ನಿಸನ್ನು ಇಂಗ್ಲೆಂಡ್ ಹಾಗೂ ಅಮೆರಿಕಕ್ಕೆ ಹೋಗಿಯೇ ವೀಕ್ಷಿಸುತ್ತಿದ್ದರು. ಪ್ರತಿ ಸಲ ಹೊರಟಾಗಲೂ ಯಾರಾದರೂ ಟೀಕಿಸಿದರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
* ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡಬ್ಲು.ಟಿ.ಎಫ್. ಟೆನಿಸ್ ಟೂರ್ನಿ ಏರ್ಪಡಿಸಿ ದೊಡ್ಡ ದೊಡ್ಡ ಟೆನ್ನಿಸ್ ಆಟಗಾರರನ್ನು ಕರೆಸಿ ಟೂರ್ನಿಯನ್ನು ಯಶಸ್ವಿಯಾಗಿಸಿದ್ದು ಅವರ ಹೆಗ್ಗಳಿಕೆ.
* ಮುಖ್ಯಮಂತ್ರಿಯಾದಾಗ ಎಲ್ಲ ಮಾಜಿ ಮುಖ್ಯಮಂತ್ರಿಗಳ ಮನೆಗೂ ಹೋಗಿ ಅವರ ಹಾರೈಕೆ ಪಡೆದು ಬಂದ ಏಕೈಕ ರಾಜಕಾರಣಿ ಎಸ್.ಎಂ.ಕೃಷ್ಣ.
* ಅವರು ಕಾಂಗ್ರೆಸ್ಸಿಗರಾಗಿದ್ದರೂ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರಕಾರವಿದ್ದಾಗ ಅವರೊಡನೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದರು. ದ್ವೇಷರಾಜಕಾರಣದಿಂದ ಬಲುದೂರ.
* ಒಮ್ಮೆ ವಿದೇಶಿ ನಿಯೋಗ ಬಂದಾಗ ಅಮೆರಿಕದ ಒಂದು ವಿಷಯದ ಬಗ್ಗೆ ವಿವರಣೆ ನೀಡುವಲ್ಲಿ ತಪ್ಪೆಸಗಿದ್ದರು. ಆಗ ಕೃಷ್ಣ ಅವರು ತಿದ್ದಿ ವಿವರಿಸಿ ಅವರನ್ನೇ ಆವಾಕ್ಕಾಗಿಸಿದ್ದರು.
* ಕನ್ನಡ ಹಾಗೂ ಇಂಗ್ಲಿಷ್ ಮೇಲೆ ಅಪಾರ ಹಿಡಿತ ಇತ್ತು; ಎಲ್ಲಿ ಹೇಗೆ ಏನು ಮಾತಾಡಬೇಕೆಂಬ ಪ್ರಜ್ಞೆ ತುಂಬಾ ಇತ್ತು.
* ತುಂಬಾ ಓದುತ್ತಿದ್ದರು. ಅವರ ಪುಸ್ತಕಭಂಡಾರ ಮತ್ತು ಜ್ಞಾನಭಂಡಾರ ದೊಡ್ಡದು.
* ಸುಂದರಾಂಗ, ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ಅವರು ಎಲ್ಲಿಯಾದರೂ ಹೋದರೆ ಅವರ ಜೊತೆ ಫೊಟೊ ತೆಗೆಸಿಕೊಳ್ಳಲು ಯುವಕ ಯುವತಿಯರು ಮುಗಿಬೀಳುತ್ತಿದ್ದರು.
* ಡಾ.ರಾಜಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ ಸಮಯ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಸಮಸ್ಯೆಯನ್ನು ಅತ್ಯಂತ ನಾಜೂಕಿನಿಂದ ಬಗೆಹರಿಸಿ ಸೈ ಎನ್ನಿಸಿಕೊಂಡರು.
* ರಾಜಕಾರಣಿಯಾಗಿ ೬೦ ವರ್ಷ ಸಕ್ರಿಯರಾಗಿದ್ದು ಏಳುಬೀಳುಗಳಿದ್ದರೂ ಸ್ಥಿರವಾಗಿ ನಿಂತ ವ್ಯಕ್ತಿತ್ವ.
* ಆಹಾರಪ್ರಿಯರಾಗಿದ್ದರು ಎಸ್.ಎಂ.ಕೃಷ್ಣ. ಬೆಂಗಳೂರಿನ ಜನಪ್ರಿಯ ಹೊಟೇಲುಗಳಿಗೆ ಆಗಾಗ ಭೇಟಿ ನೀಡುತ್ತಿದ್ದರು.
* ಅವರ ಆರೋಗ್ಯಕರ, ಸಮೃದ್ಧ, ತುಂಬು ಜೀವನ ಎಂಥವರೂ ಹೊಟ್ಟೆಕಿಚ್ಚುಪಡುವಂತಿದೆ; ಮಾದರಿಯಾಗೂ ಇದೆ.
(ಸಂಗ್ರಹ)









