ಪುರಾಣ ಕಾಲದಲ್ಲಿ ಹರಿಶ್ಚಂದ್ರ ಎಂಬ ಒಬ್ಬ ರಾಜನಿದ್ದನು (ಸತ್ಯ ಹರಿಶ್ಚಂದ್ರನಲ್ಲ). ಶೂರನೂ, ವೀರನೂ ಆದ ರಾಜನು ವೈಭವದಿಂದ ರಾಜ್ಯಭಾರ ಮಾಡುತ್ತಿದ್ದನು. ಆತನಿಗೆ ನೂರು ಜನ ಹೆಂಡತಿಯರಿದ್ದರೂ ಗಂಡು ಮಕ್ಕಳಿಲ್ಲವೆಂಬ ಚಿಂತೆ ಬಹುವಾಗಿ ಕಾಡುತ್ತಿತ್ತು. ತನ್ನ ನಂತರ ಪ್ರಜೆಗಳು ಅನಾಥರಾಗುತ್ತಾರೆ, ಹಾಗೂ ಪುತ್ರ ಸಂತಾನವಿಲ್ಲದೆ ತನಗೆ ಮೋಕ್ಷ ಸಿಗದು ಎಂಬ ಚಿಂತೆಯಲ್ಲಿರಬೇಕಾದರೆ, ಒಮ್ಮೆ ನಾರದರು, ಹಾಗೂ ಪರ್ವತರು ಅವನ ಆಸ್ಥಾನಕ್ಕೆ ಬಂದರು. ಅವರನ್ನು ಆದರದಿಂದ ಉಪಚರಿಸಿದ ಹರಿಶ್ಚಂದ್ರನು, ನಾದರದಲ್ಲಿ ತನ್ನ ಚಿಂತೆಗೆ ಪರಿಹಾರವೇನೆಂದು ಕೇಳಿದ.
ಆಗ ನಾರದರು , ವರುಣನನ್ನು ಪ್ರಾರ್ಥನೆ ಮಾಡಿ ಅವನಿಂದ ಗಂಡು ಸಂತಾನವನ್ನು ಬೇಡಿಕೋ ಎಂದು ತಿಳಿಸಿದರು. ಇದನ್ನು ಕೇಳಿ ಹರಿಶ್ಚಂದ್ರನು ಸಂತೋಷಗೊಂಡು, ವರುಣನನ್ನು ಹಲವು ಬಗೆಯಿಂದ ಪ್ರಾರ್ಥಿಸಲು, ವರುಣ ದೇವನು ಪ್ರತ್ಯಕ್ಷವಾಗಿ ರಾಜನಿಗೆ ಪುತ್ರ ಸಂತಾನದ ವರವನ್ನು ನೀಡಿದನು. ಆದರೆ ಒಂದು ಷರತ್ತಿನ ಮೇಲೆ; ಅದೇನೆಂದರೆ ಆ ಮಗುವನ್ನು ತನಗೆ ಯಜ್ಞ ಬಲಿಯಾಗಿ ದಾನ ಮಾಡಬೇಕು ಎಂದು. ಹರಿಶ್ಚಂದ್ರನು ಪುತ್ರ ಸಂತಾನದ ಬಗ್ಗೆ ಎಷ್ಟು ಹಂಬಲ ಹೊಂದಿದ್ದನೆಂದರೆ, ಹಿಂದೆ ಮುಂದೆ ಯೋಚಿಸದೆ ಹಾಗೇ ಆಗಲೆಂದು ಒಪ್ಪಿಕೊಂಡುಬಿಟ್ಟನು. ವರುಣ ದೇವ ತಥಾಸ್ತು ಎಂದ. ಕೆಲ ಕಾಲದ ನಂತರ ಹರಿಶ್ಚಂದ್ರನಿಗೆ ಪುತ್ರ ಜನಿಸಿದ. ಸ್ವಲ್ಪ ದಿನ ಕಳೆದ ಮೇಲೆ ವರುಣದೇವ ರಾಜನ ಮುಂದೆ ಪ್ರತ್ಯಕ್ಷ ನಾಗಿ ತನ್ನ ಷರತ್ತನ್ನು ನೆನಪಿಸಿದ ಆಗ ರಾಜ ಮತ್ತು ಅವನ ಪರಿವಾರ, ಮಗು ಇನ್ನೂ ಹಾಲು ಕುಡಿಯುವ ಹಸುಳೆ, ಸ್ವಲ್ಪ ದೊಡ್ಡವನಾದ ಮೇಲೆ ಕಳುಹಿಸುತ್ತೇವೆ ಎಂದು ಬೇಡಿಕೊಂಡರು. ವರುಣನ ಮನಸು ಕರಗಿ ಮತ್ತೆ ಬರುವೆನೆಂದು ತಿಳಿಸಿ ಹೊರಟುಹೋದ. ಹರಿಶ್ಚಂದ್ರ ಮಗುವಿಗೆ ರೋಹಿತನೆಂದು ಹೆಸರಿಟ್ಟರು.
ವರ್ಷ ತುಂಬಿದ ಮೇಲೆ ಮತ್ತೆ ವರುಣ ಬರುತ್ತಾನೆ. ಆಗಲೂ ಕೂಡ ಮಗುವಿಗೆ ಚೌಲ ಶಾಸ್ತ್ರದ ನಂತರ ಕಳಿಸುತ್ತೇವೆ ಅಂತ ಬೇಡಿಕೊಂಡರು. ಮತ್ತೆ ವರುಣ ದೇವನು ಒಪ್ಪಿ ಹಿಂತಿರುಗಿದ. ನಾಲ್ಕನೇ ವರುಷದಲ್ಲಿ ಮತ್ತೆ ಬಂದಾಗ ಹರಿಶ್ಚಂದ್ರನು ಅಯ್ಯಾ ವರಣದೇವನೇ ಇರುವ ಒಬ್ಬ ಮಗನಿಗೆ ಸರಿಯಾದ ವಯಸ್ಸಿನಲ್ಲಿ ಉಪನಯನ ಮಾಡಬೇಕು. ಅದನ್ನು ತಾಯ್ತಂದೆಯರೇ ಮಾಡಬೇಕು. ಆ ನಂತರ ನೀನು ನನ್ನ ಮಗನನ್ನು ಕರೆದುಕೊಂಡು ಹೋಗು ಎಂದು ಬೇಡಿಕೊಂಡ. ಕೋಪಗೊಂಡ ವರುಣನು ಮುಂದಿನ ಬಾರಿ ಬಂದಾಗ ನಿನ್ನ ಮಗನನ್ನು ಕಳುಹಿಸದಿದ್ದರೆ ನನ್ನ ಶಾಪಕ್ಕೆ ಗುರಿಯಾಗ ಬೇಕಾಗುತ್ತದೆ ಎಂದು ಎಚ್ಚರಿಸಿ ತೆರಳಿದ. ಮಗನನ್ನು ಕಳುಹಿಸುವ ಸಮಯ ಹತ್ತಿರ ಬಂದಂತೆ ರಾಜನು ಚಿಂತೆಯಿಂದ ಕೊರಗಿ ಹಾಸಿಗೆ ಹಿಡಿದ. ರಾಜಕುಮಾರನಿಗೆ ಹೇಗೋ ತಂದೆ ತಾಯಿಯ ಚಿಂತೆಯ ಕಾರಣ ತಿಳಿದು, ತನ್ನನ್ನು ವರುಣನಿಗೆ ಬಲಿ ಕೊಡುತ್ತಾರೆ ಎಂದು ಹೆದರಿ ಅರಮನೆಯಿಂದ ಓಡಿಹೋದ. ಇದರಿಂದ ರಾಜನ ಚಿಂತೆ ಮತ್ತಷ್ಟು ಹೆಚ್ಚಾಗಿ ನಾರದರನ್ನು ಪ್ರಾರ್ಥಿಸಿದನು. ಆಗ ನಾರದರು ಪ್ರತ್ಯಕ್ಷರಾಗಿ ಒಂದು ಉಪಾಯವನ್ನು ಸೂಚಿಸಿದರು. ಅದೇನೆಂದರೆ ಯುವರಾಜನ ಬದಲಾಗಿ ಅವನ ವಯಸ್ಸಿನ ಇನ್ನೊಂದು ಮಗುವನ್ನು ವರುಣನಿಗೆ ಬಲಿ ಕೊಡುವುದು ಎಂದು. ಬೇರೆ ದಾರಿ ಕಾಣದೆ ರಾಜನು ವರುಣನನ್ನು ಪ್ರಾರ್ಥಿಸಿ ಇದಕ್ಕೆ ಒಪ್ಪಿಸಿದ. ಅದರಂತೆ ಯಾರು ತಮ್ಮ ಮಗನನ್ನು ಬಲಿ ಕೊಡಲು ಮುಂದೆ ಬರುತ್ತಾರೋ ಅವರಿಗೆ ನೂರು ಹಸುಗಳನ್ನು ದಾನವಾಗಿ ಕೊಡುತ್ತೇನೆ ಎಂದು ಡಂಗುರ ಸಾರಿಸಿದ. ಆದರೆ ಯಾರೂ ಮುಂದೆ ಬರುವುದಿಲ್ಲ.
ಅಜಿಗರ್ತನೆಂಬ ಬಡ ಬ್ರಾಹ್ಮಣನು ರಾಜಭಟರು ಸಾರುವುದನ್ನು ಕೇಳಿ ತನ್ನ ಹೆಂಡತಿಯ ಬಳಿ ಬಂದು ನಾವು ನಮ್ಮ ಮೂವರು ಮಕ್ಕಳಲ್ಲಿ ಒಬ್ಬನನ್ನು ಯುವರಾಜನ ಬದಲು ಬಲಿಕೊಟ್ಟರೆ ನಮ್ಮ ಬಡತನ ನೀಗುತ್ತದೆ, ಹಸಿವಿನಿಂದ ಎಲ್ಲರೂ ಸಾಯುವ ಬದಲು ಒಬ್ಬ ಮಗನ ತ್ಯಾಗದಿಂದ ಉಳಿದವರಾದರೂ ಬದುಕಬಹುದು ಎಂದು ಹೇಳುತ್ತಾನೆ. ಅವನ ಹೆಂಡತಿಯು ದುಃಖಿಸುತ್ತಲೇ ಇದಕ್ಕೆ ಒಪ್ಪುತ್ತಾಳೆ. ಆದರೆ, ಯಾರನ್ನು ಬಲಿಗಾಗಿ ಕಳುಹಿಸುವುದು ಎಂದಾಗ, ಅಜಿಗರ್ತನು ಹಿರಿಯ ಮಗನು ನಾಳೆ ನನಗೆ ಮೋಕ್ಷವನ್ನು ಕೊಡುವವನು ಅವನನ್ನು ನಾನು ಕಳಿಸಲಾರೆ ಎಂದನು. ಅವನ ಹೆಂಡತಿಯು ಕಿರಿಯಮಗನು ಇನ್ನೂ ಚಿಕ್ಕವನು, ಮೇಲಾಗಿ ನನ್ನ ಅಚ್ಚು ಮೆಚ್ಚು ಹಾಗಾಗಿ ಅವನನ್ನು ನಾನು ಕಳಿಸಲಾರೆ ಎನ್ನುತ್ತಾಳೆ. ಕಡೆಗೆ ಉಳಿದವನೇ ಮದ್ಯದ ಮಗ ಶುನಃಶ್ಯೇಪ, ಸರಿ ಅವನನ್ನೇ ಬಲಿಗಾಗಿ ಕಳಿಸಲು ತೀರ್ಮಾನಕ್ಕೆ ಬಂದು ಅವನನ್ನು ರಾಜನಿಗೆ ಒಪ್ಪಿಸಿ ನೂರು ಹಸುಗಳನ್ನು ದಾನವಾಗಿ ಪಡೆದು ಹಿಂತಿರುಗುತ್ತಾನೆ. ಹತ್ತು ವರ್ಷದ ಆ ಬಾಲಕ ತನ್ನನ್ನು ಬಲಿಕೊಡುವರೆಂದು ತಿಳಿದು ಅಳುವುದಕ್ಕೆ ಶುರುಮಾಡುತ್ತಾನೆ. ರಾಜಭಟರು ಆಟಿಕೆಗಳನ್ನು ಕೊಟ್ಟು ಅವನನ್ನು ಸಮಾದಾನಪಡಿಸುತ್ತಾರೆ.
ಮಗುವನ್ನು ಬಲಿಕೊಡುವ ದಿನ ಬಂದೇಬಿಡುತ್ತದೆ. ಅದರೆ ಅಷ್ಟು ಸಣ್ಣ ಮಗುವನ್ನು ಸಾಯಿಸಲು ಯಾರೂ ಮುಂದೆ ಬರುವುದಿಲ್ಲ. ಆಗ ರಾಜನು ಮತ್ತೊಮ್ಮೆ, ಯಾರು ಈ ಮಗುವನ್ನು ಬಲಿಕೊಡುತ್ತಾರೋ ಅವರಿಗೆ ನೂರು ಹಸುಗಳನ್ನು ದಾನವಾಗಿ ಕೊಡುತ್ತೇನೆ ಎಂದು ಡಂಗುರ ಹೊಡೆಸುತ್ತಾನೆ. ಇದನ್ನು ಕೇಳಿದ ಅಜಿಗರ್ತನು ತಾನೇ ಮಗನನ್ನು ಬಲಿಕೊಡಲು ಮುಂದೆ ಬರುತ್ತಾನೆ. ಯಜ್ಞಕ್ಕಾಗಿ ವೇದಿಕೆ ತಯಾರಾಗುತ್ತದೆ. ವಿಶ್ವಾಮಿತ್ರ, ವಸಿಷ್ಠ, ಜಮದಗ್ನಿ ಮುಂತಾದ ಋಷಿಗಳು ಪೌರೋಹಿತ್ಯ ವಹಿಸುತ್ತಾರೆ . ಅಜಿಗರ್ತನು ಯಜ್ಞ ವೇದಿಕೆ ಬಳಿ ಬಂದು ಮಗನನ್ನು ಬಲಿ ಕಂಬಕ್ಕೆ ಬಿಗಿಯುತ್ತಾನೆ. ಎಣ್ಣೆಯಲ್ಲಿ ಅದ್ದಿದ ಬಟ್ಟೆಗಳನ್ನು ಬಾಲಕನಿಗೆ ಸುತ್ತಿ ಬೆಂಕಿ ನೀಡಲು ಪಂಜನ್ನು ಹಚ್ಚಿಕೊಳ್ಳುತ್ತಾನೆ. ಇದರಿಂದ ಹೆದರಿದ ಬಾಲಕ ಕಣ್ಣು ಮುಚ್ಚಿ ತನಗೆ ತಿಳಿದ ಶ್ಲೋಕಗಳನ್ನು ಹೇಳಿಕೊಳ್ಳುತ್ತಾ ದೇವರನ್ನು ಪ್ರಾರ್ಥನೆ ಮಾಡುತ್ತಾನೆ. ಮಗುವಿನ ಪ್ರಾರ್ಥನೆ ಕೇಳಿ ದೇವತೆಗಳ ಮನ ಕರಗಿದರೂ ವರುಣನ ಭಯದಿಂದ ಸಹಾಯ ಮಾಡದೇ ಸುಮ್ಮನಾಗುತ್ತಾರೆ . ಕಡೆಗೆ ಉಷಸ್ ಎಂಬ ದೇವತೆಯು ಭೂಮಿಗಿಳಿದು ಬಂದು ಮಗುವನ್ನು ಬೆಂಕಿಯಿಂದ ರಕ್ಷಿಸುತ್ತಾಳೆ. ಆ ಮಗುವನ್ನು ವಿಶ್ವಾಮಿತ್ರರು ಮಗನಾಗಿ ಸ್ವೀಕರಿಸಿ ತಮ್ಮ ವಿದ್ಯೆಯನ್ನು ಧಾರೆಯೆರೆಯುತ್ತಾರೆ.
ಶುನಃಶ್ಶೇಪ ವರುಣದೇವರನ್ನು ಪ್ರಾರ್ಥನೆಯ ಮೂಲಕ ಸಂಪ್ರೀತಗೊಳಿಸಿ ರಾಜಕುಮಾರನ ಬಲಿಯ ವಾಗ್ದಾನವನ್ನು ಹಿಂಪಡೆಯುವಂತೆ ಮಾಡುತ್ತಾನೆ. ಹರಿಶ್ಚಂದ್ರನಿಗೆ ಓಡಿಹೋದ ಮಗ ಪುನಃ ದೊರೆಯುತ್ತಾನೆ. ಎಲ್ಲರೂ ಬಾಲಕ ಶುನಃಶ್ಶೇಪನನ್ನು ಅನುಗ್ರಹಿಸುತ್ತಾರೆ.
ಮುಂದೆ ಆ ಬಾಲಕನು ಶುನಃಶ್ಯೇಪ ದೇವರಾತ ಅಂದರೆ ದೇವರಿಂದ ದಯಪಾಲಿಸಲ್ಪಟ್ಟವನು ಎಂದು ಖ್ಯಾತಿ ಹೊಂದುತ್ತಾನೆ.
- ಪದ್ಮಾವತಿ ವೆಂಕಟೇಶಮೂರ್ತಿ, ಆನೆಕೆರೆ









