ಚಿತೆಯಲ್ಲಿ ಉರಿಯದ ಕಟ್ಟಿಗೆ
ಅಡುಗೆ ಒಲೆಗೆ!
ಕಾಶಿಯ ಡೋಮ್ ಜನರು; ಅಂತ್ಯ ಸಂಸ್ಕಾರವೇ ಬದುಕು
ಕಾಶಿಗೆ ಹೋದೋರು ದಿನದ ೨೪ ಗಂಟೆ ಚಿತೆಗಳು ಉರಿತನೇ ಇರೋ ಹರಿಶ್ಚಂದ್ರ ಘಾಟ್ ಹಾಗೂ ಮಣಿಕರ್ಣಿಕಾ ಘಾಟ್ಗಳಿಗೆ ತಪ್ಪದೇ ಭೇಟಿ ಕೊಡ್ಲೇಬೇಕು. ಸಾವಿರಾರು ವರ್ಷಗಳಿಂದ ಚಿತೆಗಳು ಉರೀತಿವೆ ಅಲ್ಲಿ. ಹಾಗಂತ ಹೋಗೋದನ್ನ ತಪ್ಪಿಸಿಕೊಳ್ಳೋಕೆ ಬೇರೆಲ್ಲೋ ಹೋದರೂ ಅದು ತಪ್ಪಿಹೋಗಲ್ಲ. ಅಕಸ್ಮಾತ್ ಸುತ್ತಿ ಸುತ್ತಿ ಅಲ್ಲಿಗೇ ಹೋಗಿ ತಲುಪ್ತೀರಾ. ಒಂದ್ಸಲ ಅರೆ ಎಲ್ಲಿಗೆ ಬಂದ್ವಿ ಅಂತ ಗೊಂದ್ಲ ಆಗತ್ತೆ. ಆಮೇಲೆ ಗೊತ್ತಿಲ್ಲದೇ ನೀರವ ಮೌನ ಆವರಿಸುತ್ತೆ. ಇಷ್ಟೇನಾ ಜೀವನ ಅನ್ನಿಸುತ್ತೆ. ಕೆಲವರ ಕೈ ಉರಿತಿರತ್ತೆ. ಕಾಲು ಬೇಯುತ್ತಿರುತ್ತೆ. ತಲೆ ಫಟ್ಅಂತ ಒಡೆದಾಗ ಬರೋ ಚಟಪಟ ಸದ್ದು. ಆದ್ರೆ ಭಯ ಆಗಲ್ಲ. ಹುಟ್ಟು ಹಾಗೂ ಸಾವಿನ ಬಗ್ಗೆ ಚಿಂತಿಸೋ ಹಾಗೆ ಮಾಡುತ್ತೆ. ಬದುಕಿದ್ದಷ್ಟು ದಿನ ಒಳ್ಳೇದು ಮಾಡ್ಬೇಕು ಅಂತ ಕ್ಷಣಕಾಲ ಆದ್ರೂ ಅನ್ನಿಸುತ್ತೆ. ಅದಿರ್ಲಿ.. ಈ ಕಾಶಿಯೆಂಬೋ ಮಹಾಸ್ಮಶಾನದಲ್ಲಿ ಕೆಲವರ ಮರಣ ಇಲ್ಲಿ ಹಲವರ ಜೀವನ. ಹಾಗೆ, ಉರಿಯೋ ಚಿತೆಯನ್ನ ಅವಲಂಬಿಸಿ ಜೀವನ ಕಟ್ಟಿಕೊಂಡ ಒಂದು ಸಮುದಾಯ ಇಲ್ಲಿದೆ. ಅವರ ಜೋಪಡಿಮನೆಗಳು ಸ್ಮಶಾನದ ಪಕ್ಕನೇ ಇರುತ್ತಾವೆ. ಶವ ಸುಡೋಕೆ ಪೇರಿಸಿಟ್ಟ ಕಟ್ಟಿಗೆ ರಾಶಿಯ ಪಕ್ಕನೇ ಅವರ ಮಕ್ಕಳುಗಳು ಆಟ ಆಡ್ಕೊಂಡಿರ್ತಾವೆ. ಶವ ಕಂಡ್ರೆ ಭಯವೇ ಇಲ್ದಿರೋ ಭವದ ಮಕ್ಕಳಿವ್ರು.. ಗಂಡಸ್ರು ಸದಾ ಧಗಧಗ ಉರಿಯೋ ಚಿತೆ ಜೊತೆ ಇಪ್ಪತ್ನಾಲ್ಕು ಗಂಟೆ ಕರ್ತವ್ಯ ಮಾಡ್ಬೇಕು.. ಮನುಷ್ಯ ಮಾಂಸ ಸುಟ್ಟಾಗ ಬರುವ ಕಮಟು ವಾಸನೆ ತಡ್ಕೊಬೇಕು.. ಕೆಲಸ ಮಾಡೋವಾಗ ಮೈಕೈಗೆ ಚಿತೆಯ ಬೂದಿ ಮೆತ್ತಿಕೊಳ್ಳಬಹುದು.. ಹೊರ ಜಗತ್ತಿನ ಸಂಪರ್ಕ ತೀರಾ ಕಡಿಮೆ. ಅದು ಅವರದೇ ಜ್ವಾಲೆಯ ನಡುವಿನ ಜಗತ್ತು. ಅವರೇ ಡೋಮ್ ಸಮುದಾಯ. ಸಾವಿನ ಅಧಿಪತಿ ಯಮನಿಗೆ ಇವರ ನೇರ ಸಂಪರ್ಕವಂತೆ. ಶಿವನಿಂದ ಇವರು ವರ ಪಡೆದವ್ರಂತೆ. ಆದರೂ ಸಮಾಜಕ್ಕೆ ಇವರು ಅಸ್ಪೃಶ್ಯರು. ಇವ್ರ ಬಗ್ಗೆ ಇನ್ನಷ್ಟು ಹೇಳ್ತೀನಿ..
ದೃಶ್ಯಕಾವ್ಯ ಕನ್ನಡ ವಾಹಿನಿನ ಸಬಸ್ಕ್ರೈಬ್ ಮಾಡಿ, ಮರಿದೆ ಈ ವಿಡಿಯೋ ಲೈಕ್ ಮಾಡಿ, ಕಮೆಂಟ್ ಮಾಡಿ. ಹೆಚ್ಚೆಚ್ಚು ಷೇರ್ ಮಾಡಿ..
ಮರಣ ಅನ್ನೋದು ಒಂದು ಬಿಡುಗಡೆ. ಒಂದು ವಿಮೋಚನೆ. ಗರುಡ ಪುರಾಣದ ಪ್ರಕಾರ ಬದುಕಿದ್ದಾಗ ಮೋಸ ಕಪಟ ವಂಚನೆ ಮಾಡಿದ ವ್ಯಕ್ತಿಗೆ ಮರಣಯಾತನೆ ಅಂದ್ರೆ ಮೂವತ್ತಾಲ್ಕು ಸಾವಿರ ಚೇಳು ಕುಟುಕಿದ ಹಾಗೆ ಇರುತ್ತಂತೆ. ಸಜ್ಜನರಿಗೆ ಮರಣಯಾತನೆ ಅಷ್ಟು ತೀವ್ರವಾಗಿರೋದಿಲ್ವಂತೆ. ಹಾಗೆನೆ ಸತ್ತಮೇಲೆ ಎಲ್ಲರ ಆತ್ಮಗಳೂ ಮೊದಲು ಹೋಗೋದು ಯಮಲೋಕಕ್ಕೆ ಅನ್ನುತ್ತೆ ಗರುಡಪುರಾಣ. ಯಮಲೋಕಕ್ಕೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ದ್ವಾರಗಳಿರ್ತಾವೆ. ಸಚ್ಚಾರಿತ್ರ್ಯ ಉಳ್ಳಂಥ, ಕುಟುಂಬವನ್ನ ಚೆನ್ನಾಗಿ ನೋಡ್ಕೊಂಡಂಥ ವ್ಯಕ್ತಿಯ ಆತ್ಮಕ್ಕೆ ಪೂರ್ವದ್ವಾರದಿಂದ ಪ್ರವೇಶ. ಸಾಕಷ್ಟು ದಾನ ಧರ್ಮ ಮಾಡಿದವರ ಆತ್ಮಕ್ಕೆ ಪಶ್ಚಿಮ ದ್ವಾರದಿಂದ ಪ್ರವೇಶ. ಸಂತರು, ಮಹಾತ್ಮರು ಮುಂತಾದವರ ಆತ್ಮಕ್ಕೆ ಉತ್ತರದ ದ್ವಾರದಿಂದ ಪ್ರವೇಶ. ಬದುಕಿದ್ದಾಗ ಮೋಸ, ಕಪಟ, ವಂಚನೆ ಮಾಡಿದ ವ್ಯಕ್ತಿಗಳ ಆತ್ಮಕ್ಕೆ ದಕ್ಷಿಣ ದ್ವಾರದಿಂದ ಪ್ರವೇಶ. ಆ ನಂತರ ಯಮರಾಜನ ಸಮಕ್ಷಮದಲ್ಲಿ ವಿಚಾರಣೆ. ಅವರವರ ಪಾಪ ಪುಣ್ಯಗಳ ಅನುಸಾರ ಶಿಕ್ಷೆ ಹಾಗೂ ಮುಂದಿನ ಜನ್ಮ ನಿರ್ಧಾರವಾಗತ್ತೆ ಅಂತ ಹೇಳಲಾಗಿದೆ. ಕಾಶಿಯಲ್ಲಿ ಅಂತಿಮ ಸಂಸ್ಕಾರವಾದರೆ ಮೋಕ್ಷ ಎಂಬ ನಂಬಿಕೆಯಿಂದೆ. ಹಾಗಾಗಿ ಮರಣದಿಂದ ಮೋಕ್ಷದ ಕಡೆಗೆ ಕರ್ಕೊಂಡು ಹೋಗೋರು ಡೋಮ್ ಜನರು ಅಂತ ನಂಬ್ತಾರೆ.
ಕಾಶಿಲಿ ಡೋಮ್ ಸಮುದಾಯದ ಸುಮಾರು ೨೫೦ ಕುಟುಂಬಗಳಿವೆ. ಇವರೆಲ್ಲ ಚಿತೆಯ ಜೊತೆಗೇ ಬದುಕು ಕಟ್ಟಿಕೊಂಡವರು.. ರಾಮಾಯಣದಲ್ಲೇ ಡೋಮ್ ಜನರ ಉಲ್ಲೇಖ ಇದೆ. ಆನಂತರ ಗಂಗೆಯಲ್ಲಿ ಎಷ್ಟು ನೀರು ಹರಿದಿರಬಹುದು.. ಘಾಟ್ಗಳಲ್ಲಿ ಎಷ್ಟು ಕೋಟಿ ಹೆಣ ಸುಟ್ಟಿರಬಹುದು.. ಹೇಳ್ಬೇಕು ಅಂದ್ರೆ ಕಾಶಿಯಲ್ಲಿ ಸ್ಮಶಾನ ಕಾದ ಹರಿಶ್ಚಂದ್ರ ಶ್ರೀರಾಮನಿಗಿಂತ ಎಷ್ಟೋ ತಲೆಮಾರು ಹಿಂದಿನ ದೊರೆ. ಆಗಿನಿಂದಲೂ ಈ ಸಮುದಾಯ ಇದೇ ಕೆಲಸ ಮಾಡಿಕೊಂಡು ಬಂದಿದೆ. ಹೀಗೆ ಧಗಧಗ ಉರಿಯೋ ಚಿತೆಯ ಮುಂದೆ ನಿರಂತರ ಕೆಲಸ ಮಾಡೋಕೆ ಆತ್ಮಸ್ಥೈರ್ಯ, ಧೈರ್ಯ ಬೇಕು. ಸಾಮಾಜಿಕವಾಗಿ ಇವರು ಕೆಳವರ್ಗ ಅನ್ನಿಸಿಕೊಂಡ್ರು ಮಾನಸಿಕವಾಗಿ ಜನಸಾಮಾನ್ಯರಿಗಿಂತ ಮೇಲ್ಮಟ್ಟದಲ್ಲಿ ಇರ್ತಾರೆ. ರಾತ್ರಿ ಮದ್ಯಪಾನ, ಚರಸ್ ಹೊಡೆದು ಕೆಲವೊಮ್ಮೆ ಉತ್ತುಂಗ ತಲುಪೋದೂ ಉಂಟಂತೆ.
ಡೋಮ್ ಸಮುದಾಯದ ಮುಖ್ಯಸ್ಥನನ್ನ ಡೋಮ್ ರಾಜಾ ಅಂತ ಕರಿತಾರೆ. ಹರಿಶ್ಚಂದ್ರನ ಕಾಲದಲ್ಲಿ ಡೋಮ್ ರಾಜಾ ಯಾರು ಗೊತ್ತಲ್ಲ.. ವೀರಬಾಹು.
(ರಾಘವಾಂಕನ ಕಾವ್ಯದಲ್ಲಿ ಅವನ ವರ್ಣನೆ)
ಈಗ ಡೋಮ್ ರಾಜಾ ಹರಿಓಂ ಚೌಧರಿ ಅಂತ. ಸ್ಮಶಾನಕ್ಕೆ ಯಜಮಾನ. ಇವನಿಗೆ ತಂದೆ ಜಗದೀಶ್ ಚೌಧರಿಯಿಂದ ಈ ಅಧಿಕಾರ ವಂಶಪಾರಂಪರ್ಯವಾಗಿ ಸಿಕ್ಕಿದೆಯಂತೆ. ಅಸಲಿಗೆ ತಂದೆ ತೀರಿಕೊಂಡಾಗ ಇವರಿಗೆ ಕೇವಲ ೧೫ ವರ್ಷ. ೧೫ ವರ್ಷದ ಬಾಲಕ ಸ್ಮಶಾನದ ಯಜಮಾನನಾಗಿಬಿಟ್ಟಿದ್ದ! ಹರಿಓಂ ಪ್ರಾಪ್ತ ವಯಸ್ಸಿಗೆ ಬರೋತನಕ ಅಜ್ಜಿ ಸಾರಂಗಿ ದೇವಿ ಅವನ ಎಲ್ಲ ಕರ್ತವ್ಯ ನಿಭಾಯಿಸಿದ್ಲಂತೆ. ಡೋಮ್ ಜನರಲ್ಲಿ ಮಹಿಳೆಯರು ಸ್ಮಶಾನದಲ್ಲಿ ಕೆಲಸ ಮಾಡುವಂತಿಲ್ಲ. ಕಟ್ಟುನಿಟ್ಟು ಜಾಸ್ತಿ. ತಲೆಮೇಲೆ ಛದ್ದರ್ ಹಾಕಿಕೊಳ್ಳೋದು ಕಡ್ಡಾಯ. ಬಾಲ್ಯವಿವಾಹ ಮಾಮೂಲು. ಸಾರಂಗಿದೇವಿ ಮನೆಯಲ್ಲಿದ್ದುಕೊಂಡೇ ಯಜಮಾನಿಕೆ ನಿಭಾಯಿಸಿದ ದಿಟ್ಟ ಮಹಿಳೆ. ಜಗದೀಶ್ ಚೌಧರಿ ಸ್ವಲ್ಪ ಹೊರಜಗತ್ತು ನೋಡಿದವರಾಗಿದ್ರು. ಚುನಾವಣೆಗೂ ನಿಂತಿದ್ರಂತೆ. ನರೇಂದ್ರ ಮೋದಿ ಪ್ರಧಾನಮಂತ್ರಿ ಅಭ್ಯರ್ಥಿ ಆಗಬೇಕು ಬಿಜೆಪಿ ಸಭೇಲಿ ಆಗ ಪ್ರಸ್ತಾಪ ಇಟ್ಟೋರು ಇದೇ ಜಗದೀಶ್ ಚೌಧರಿ ಅಂತೆ. ನರೇಂದ್ರ ಮೋದಿ ಈಗ ಇದೇ ವಾರಾಣಸಿ ಕ್ಷೇತ್ರದ ಸ೦ಸದರು ಅನ್ನೋದು ಗಮನಾರ್ಹ.
ಇದೇ ಕಥನ ದೃಶ್ಯಕಾವ್ಯ ಕನ್ನಡ ಯುಟ್ಯೂಬ್ ವಾಹಿನಿಯಲ್ಲಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ-







