(ಚರಿತ್ರೆ)
ಚಾಲುಕ್ಯ ಚಕ್ರವರ್ತಿಗಳಲ್ಲಿ ಮಹಾಪರಾಕ್ರಮಿ ಅಂದ್ರೆ ಇಮ್ಮಡಿ ಪುಲಿಕೇಶಿ. ಸಾಧುಂಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್; ಮಾಧವನ್ ಈತನ್ ಪೆರನಲ್ಲ ಅಂತ ಬಾದಾಮಿಯ ಕಪ್ಪೆಅರೆಭಟ್ಟನ ಶಾಸನದಲ್ಲಿ ಇವತ್ತಿಗೂ ಇದೆ. ಇದು ಪುಲಿಕೇಶಿಯ ಪರಾಕ್ರಮದ ಬಗ್ಗೆ ಇರೋ ಶಾಸನ ಅಂತ ಹೇಳಲಾಗಿದೆ. ಇಮ್ಮಡಿ ಪುಲಿಕೇಶಿ ಉತ್ತರದಲ್ಲಿ ನರ್ಮದಾ ಹಾಗೂ ಗೋದಾವರಿ ತೀರದ ತನಕ ರಾಜ್ಯ ವಿಸ್ತರಣೆ ಮಾಡಿದ್ದ. ಕನೌಜ್ ನ ಹರ್ಷವರ್ಧದನನನ್ನ ಸೋಲಿಸಿದ್ದ. ದಕ್ಷಿಣದಲ್ಲಿ ಕಾವೇರಿ ತೀರದವರೆಗೆ ಅವನ ಚಕ್ರಾಧಿಪತ್ಯವಿತ್ತು. ಕಂಚಿಯ ಪಲ್ಲವರನ್ನು ಸೋಲಿಸಿದ್ದ. ಈ ಅವಮಾನಕ್ಕೆ ಸೇಡು ತೀರಿಸ್ಕೊಳೋಕೆ ಪಲ್ಲವರ ದೊರೆ ನರಸಿಂಹವರ್ಮನ್ ಕಾಯ್ತಿರ್ತಾನೆ. ಆತನ ಸೇನಾಧಿಪತಿ ಪರಂಜ್ಯೋತಿ ಮಹಾಚತುರನಾಗಿರ್ತಾನೆ. ಇತಿಹಾಸಕಾರರು ಹೇಳೋ ಪ್ರಕಾರ ಇಮ್ಮಡಿ ಪುಲಿಕೇಶಿ ಹರ್ಷವರ್ಧನನ ಮೇಲೆ ತಾನೇ ಸ್ವತಃ ಆಕ್ರಮಣ ಮಾಡೋಕೆ ದೊಡ್ಡ ಸೈನ್ಯ ತಗೊಂಡು ಎರಡನೆ ಸಲ ಹೋಗ್ತಾನೆ. ಇದೇ ಸಮಯ ಸಾಧಿಸಿ ಪಲ್ಲವ ಸೇನಾಧಿಪತಿ ಪರಂಜ್ಯೋತಿ ಸೇನೆಯೊಂದಿಗೆ ಬಾದಾಮಿಗೆ ಮುತ್ತಿಗೆ ಹಾಕಿ ವಶಪಡಿಸ್ಕೊಂಡುಬಿಡ್ತಾನೆ. ಪುಲಿಕೇಶಿ ಸೈನ್ಯ ಎಷ್ಟು ದೂರ ಇರುತ್ತೆ ಅಂದ್ರೆ ವಿಷಯ ಗೊತ್ತಾದ್ರೂ ಮರಳಿ ಬರೋದಕ್ಕೆ ಎರಡು ಮೂರು ತಿಂಗಳು ಬೇಕಾಗುವಷ್ಟು ದೂರ. ಪರಂಜ್ಯೋತಿ ಕೋಟೆ ಪರಿಶೀಲನೆ ಮಾಡ್ಬೇಕಾದ್ರೆ ಒಂದು ಕಡೆ ಮಾತ್ರ ಒಂದು ಗಣಪತಿ ವಿಗ್ರಹಕ್ಕೆ ದಿನಾ ಪೂಜೆ ನೆಡಿತಾ ಇದ್ದಿದ್ದು ಗೊತ್ತಾಗುತ್ತೆ. ಆ ಗಣಪತಿ ವಿಗ್ರಹ ಮಾತ್ರ ಪೂಜೆಗೊಳ್ಬೇಕಾದ್ರೆ ಬಲವಾದ ಕಾರಣ ಇರಬಹುದು.. ಅದ್ರ ಬುಡದಲ್ಲಿ ಗುಪ್ತ ಮಾರ್ಗಗಳೇನಾದ್ರೂ ಇರ್ಬಹುದು ಅಂತ ಗುಮಾನಿ ಮೇಲೆ ಪರಿಶೀಲಿಸ್ತ ಇರ್ತಾನೆ. ಅಷ್ಟರಲ್ಲಿ ಅವನ ಮೇಲೆ ದೂರದಿಂದ ಯಾರೂ ಗುರಿಕಾರರು ಬಾಣಗಳನ್ನ ಬಿಡ್ತಾರೆ. ಪರಂಜ್ಯೋತಿ ಅದು ಹೇಗೋ ಗಣಪತಿ ವಿಗ್ರಹದ ಹಿಂದೆ ಅವಿತು ತಪ್ಪಿಸ್ಕೊಳ್ತಾನೆ. ಆದ್ರೆ ಅವನ ಸಿಟ್ಟು ಜಾಸ್ತಿ ಆಗತ್ತೆ. ರಾಣಿ ವಾಸದವರನ್ನ ಹಿಡಿದು ತರೋಕೆ ಹೇಳ್ತಾನೆ. ಅವರು ಒಬ್ಬಳು ಅಪ್ರತಿಮ ಸುಂದರಿ ಹಾಗೂ ಅವರ ದಾಸಿಯರನ್ನ ಬಂಧಿಸ್ತಾರೆ. ಸುಂದರಿ ರಾಜನ ಉಪಪತ್ನಿಯರಲ್ಲಿ ಒಬ್ಳು ಅಂತ ಹೇಳ್ತಾಳೆ. ತಾನೇ ದಿನಾಲೂ ಗಣಪತಿ ವಿಗ್ರಹಕ್ಕೆ ಪೂಜೆ ಮಾಡ್ತಿದ್ದುದಾಗಿ ಹೇಳ್ಕೊತಾಳೆ. ಅವಳ ಕೊರಳಲ್ಲಿ ಅಮೂಲ್ಯವಾದ ಪದಕ ಇರೋ ಒಂದು ಅಪರೂಪದ ಹಾರ ಇರುತ್ತೆ. ಪರಂಜ್ಯೋತಿ ಈಕೆಯನ್ನು ಹಾರದ ಸಮೇತ, ಜೊತೆಗೆ ನೂರಾರು ಆನೆಗಳ ಮೇಲೆ ಬಾದಾಮಿಯ ಸಂಪತ್ತನ್ನೆಲ್ಲ ಹೇರಿ, ಕಂಚಿಯಲ್ಲಿರೊ ತನ್ನ ರಾಜ ನರಸಿಂಹವರ್ಮನ್ ಗೆ ಕಳಿಸಿಕೊಡ್ತಾನೆ. ತಾನು ಇನ್ನೂ ಒಂದು ತಿಂಗಳು ಬಾದಾಮಿಲಿ ಉಳಿದು ಪಲ್ಲವರ ಆಡಳಿತ ನೆಲೆಗೊಳಿಸಿ, ವಿಜಯದ ಸಂಕೇತವಾಗಿ, ಅಂದು ನೋಡಿದ್ದ ಗಣಪತಿಯ ವಿಗ್ರಹವನ್ನು ಕಿತ್ತು ಹೊತ್ತೊಯ್ದುಬಿಡುತ್ತಾನೆ. ಅದೇ ವಾತಾಪಿ ಗಣಪತಿ.
ತಿಂಗಳು ತಡವಾಗಿ ಪರಂಜ್ಯೋತಿ ಕಂಚಿ ತಲುಪ್ತಾನೆ. ಭಾರಿ ವಿಜಯೋತ್ಸವ ಆಚರಿಸಲಾಗುತ್ತೆ. ನರಸಿಂಹವರ್ಮನ್ಗೆ ವಾತಾಪಿ ಕೊಂಡನ್ ಎಂದು ಕೊಂಡಾಡುತ್ತಾರೆ. ಪರಂಜ್ಯೋತಿಯ ಪತ್ನಿಯನ್ನೂ ಕರೆಸಿ ರಾಜ ಇಬ್ಬರನ್ನೂ ಸತ್ಕರಿಸುತ್ತಾನೆ. ತಾನು ಕಳಿಸಿದ ಸುಂದರಿಯ ಕೊರಳಲ್ಲಿದ್ದ ಕಂಠಿಹಾರ ತನ್ನ ಪತ್ನಿಯ ಕೊರಳಲ್ಲಿ ನೋಡಿಬಿಡ್ತಾನೆ. ಸುಂದರಿಯಿಂದ ಮಹಾರಾಜನಿಗೆ, ಅಲ್ಲಿಂದ ತನ್ನ ಪತ್ನಿಗೆ ಈ ಹಾರ ಬಂದ ರೀತಿ ನೆನೆದು ಅವನಿಗೆ ಕಸಿವಿಸಿ ಉಂಟಾಗುತ್ತದೆ. ಈ ಬಗ್ಗೆ ಸುಂದರಿಯನ್ನು ಕೇಳಿದಾಗ, ಆಕೆ ಆ ಹಾರವನ್ನು ಮಹಾರಾಜರೇ ನಿನ್ನ ಪತ್ನಿಗೆ ಪ್ರೀತಿಯಿಂದ ಉಡುಗೊರೆಯಾಗಿ ಕೊಟ್ಟಿದ್ದು ಎಂಬ ಗುಟ್ಟು ಬಯಲು ಮಾಡುತ್ತಾಳೆ. ಅಷ್ಟೇ ಅಲ್ಲ; ನೀನು ವರ್ಷಾನುಗಟ್ಟಳೆ ಯುದ್ಧಕ್ಕೆ ಹೋದಾಗ ನಿನ್ನ ಪತ್ನಿ ರಾಜರ ಬಲೆಗೆ ಬಿದ್ದುದರಲ್ಲಿ ತಪ್ಪಿಲ್ಲ. ನೀನು ಬಾದಾಮಿಯಲ್ಲಿ ಒಂದು ಹೆಣ್ಣನ್ನೂ ಮುಟ್ಟದೇ ಇದ್ದೆಯಾ? ಎಂದು ಕೇಳಿ ತಬ್ಬಿಬ್ಬು ಮಾಡುತ್ತಾಳೆ. ಇನ್ನೂ ಒಂದು ಸತ್ಯ ಎಂದರೆ ತಾನು ಪುಲಿಕೇಶಿಯ ಉಪಪತ್ನಿ ಅಲ್ಲ. ಆತ ಕಂಚಿಯನ್ನು ಗೆದ್ದಾಗ ಕರೆದುಕೊಂಡ ಹೋದ ಇಲ್ಲಿಂದಲೇ ಬಾದಾಮಿಗೆ ಕರೆದುಕೊಂಡು ಹೋದ ದಾಸಿಗೆ ಹುಟ್ಟಿದ ಮಗಳು. ಪುಲಿಕೇಶಿಯ ರಾಣಿಯರೆಲ್ಲ ಸುರಂಗಮಾರ್ಗದಲ್ಲಿ ಪಾರಾಗಿದ್ದಾರೆ. ನೀನು ಕಂಚಿಯ ಗಣಿಕಾ ಸ್ತ್ರೀಯ ಪುತ್ರಿಯನ್ನು ಕಂಚಿಗೇ ಕರೆತಂದು ಮಹಾರಾಜನಿಗೆ ಉಡುಗೊರೆ ನೀಡಿದೆ. ಬಾದಾಮಿಯಲ್ಲಿ ಕೂಡ ಗಣಪತಿಗೆ ಪೂಜೆ ಮಾಡಿ, ಅಲ್ಲಿಗೆ ನೀನು ಬರುವಂತೆ ಮಾಡಿ, ನಿನ್ನ ಮೇಲೆ ಬಾಣ ಹೂಡಲು ವ್ಯವಸ್ಥೆ ಮಾಡಿದವರೆಲ್ಲ ನಾವೇ.. ಅಸಲಿಗೆ ಮಹಾರಾಜ ಪುಲಿಕೇಶಿಗೆ ಅಷ್ಟು ದೂರದಿಂದ ಇಂಥ ಚತುರೋಪಾಯ ಮಾಡುವುದಕ್ಕೆ ಸಾಧ್ಯವೇ ಇರಲಿಲ್ಲ ಎನ್ನುತ್ತಾಳೆ. ಅಂದರೆ ಬಾದಾಮಿಯ ಮಹಿಳೆಯರೆಲ್ಲ ಸೇರಿ ತನ್ನನ್ನು ಮಂಗ ಮಾಡಿ ಕಳಿಸಿದ್ದು ಕೇಳಿ ಸೇನಾಧಿಪತಿ ಪರಂಜ್ಯೋತಿ ನಿರ್ವಿಣ್ಣನಾಗಿಹೋಗುತ್ತಾನೆ. ಇಷ್ಟೆಲ್ಲ ತಂತ್ರ ಪ್ರತಿತಂತ್ರ ಹೂಡಿ ಯುದ್ಧಮಾಡಿ ರಕ್ತಪಾತ ಮಾಡಿ ಕೊನೆಗೆ ತಾನೇನು ಗೆದ್ದೆ ? ಎಂಬ ನಶ್ವರತೆ ಆವರಿಸುತ್ತದೆ. ಮಹಾರಾಜರಿಗಾಗಿ ವರ್ಷಾನುಗಟ್ಟಲೆ ಹೋರಾಡಿ ಬಾದಾಮಿ ಗೆದ್ದು ಬಂದರೆ, ಈ ರಾಜ ಮಾಡಿದ್ದೇನು? ತನ್ನ ಹೆಂಡತಿಯ ಮನಸ್ಸನ್ನೇ ಕದ್ದನಲ್ಲ ಎಂಬ ಖೇದ ಆವರಿಸುತ್ತದೆ. ತಕ್ಷಣ ಸೇನಾ ಹುದ್ದೆಯನ್ನು ತ್ಯಜಿಸಿ ತನ್ನನ್ನು ಕಾಪಾಡಿದ ಗಣಪತಿ ವಿಗ್ರಹವನ್ನು ಮಾತ್ರ ತೆಗೆದುಕೊಂಡು ಹುಟ್ಟೂರು ತಿರುಚಂಕಟ್ಟಂಕುಡಿಗೆ ಹೋಗಿ ಅಲ್ಲಿ ಪ್ರತಿಷ್ಠಾಪಿಸುತ್ತಾನೆ. ಸಂನ್ಯಾಸ ಸ್ವೀಕರಿಸಿ ಅಪರಿಮಿತ ಶಿವಭಕ್ತನಾಗುತ್ತಾನೆ. ತಮಿಳುನಾಡಿನ ಪ್ರಸಿದ್ಧ ೬೩ ನಾಯನ್ಮಾರ್ ಸನ್ಯಾಸಿಗಳಲ್ಲಿ ಒಬ್ಬನಾಗಿ ಈಗಲೂ ಗುರುತಿಸಿಕೊಳ್ಳುತ್ತಾನೆ- ಪರಂಜ್ಯೋತಿ. ಎಲ್ಲ ವಾತಾಪಿ ಗಣಪತಿಯ ಲೀಲೆ ಅನ್ನಬಹುದಲ್ಲವೆ?
ಗಣಪತಿ ವಿಗ್ರಹವಂತೂ ಈಗ ವಾತಾಪಿಯಲ್ಲಿ ಇಲ್ಲ. ಆದರೆ ಬಾದಾಮಿಯಲ್ಲಿ ಅದೆಲ್ಲಿತ್ತು ಅಂತ ದೃಶ್ಯಕಾವ್ಯ ತಂಡು ಹುಡುಕೊಂಡು ಬನಶಂಕರಿ ದೇವಸ್ಥಾನದ ತನಕ ಬಂದಿದೆ. ಅಲ್ಲಿನ ಕಲ್ಯಾಣಿಗೆ ಪೂರ್ತಿ ಸುತ್ತು ಹೊಡೆದು, ದೇವಸ್ಥಾನಕ್ಕೆ ಹೋಗಿ ಅಮ್ಮನವರ ದರ್ಶನ ಮಾಡ್ಕೊಂಡು ಸುತ್ತುಮುತ್ತ ಪರಿವೀಕ್ಷಣೆ ಮಾಡಿ ಹೊರಗೆ ಬಂದ್ವಿ. ವಾತಾಪಿ ಗಣಪತಿ ಅಲ್ಲೆಲ್ಲೂ ಇದ್ದ ಕುರುಹು ಸಿಗ್ಲಿಲ್ಲ.
ಬನಶಂಕರಿ ದೇವಸ್ಥಾನದಿಂದ ಗುಹಾಂತರ್ದೇವಾಲಯಕ್ಕೆ ಹೊರಟ್ವಿ. ಐದು ಕಿಲೋಮೀಟರ್ ದಾರಿ. ದೂರದಿಂದಲೇ ಬೆಟ್ಟ ಕಂಡಾಗ ರೋಮಾಂಚನ. ಆ ಬೆಟ್ಟದಲ್ಲಿ ಎಲ್ಲಿ ಇದ್ದಿದ್ದ… ವಾತಾಪಿ ಗಣಪತಿ?
ನಾಲ್ಕು ಗುಹಾಂತರ್ಗಳಲ್ಲಿ ಮೊದಲನೆಯ ಗುಹೆಗೆ ಹೋದ್ವಿ.. ಇದು ಶಿವನಿಗೆ ಸಂಬಂಧಪಟ್ಟ ದೇವಾಲಯ. ಮಹಿಶಾಸುರ ಮರ್ದಿನಿ ದುರ್ಗೆ ಇದಾಳೆ. ಅಂದ್ಮೇಲೆ ಗಣೇಶ ಇದ್ದಿರ್ಲೇಬೇಕು. ವಾತಾಪಿ ಗಣಪತಿ ಈ ಕಂಬದ ಮೇಲಿದ್ನೆ. ಆ ಗೋಡೆಯ ಹತ್ರ ಇದ್ನೆ. ಈ ಗರ್ಭಗುಡಿಲಿದ್ನೆ. ಓ ಆ ಮೋಹಕ ನಟರಾಜನ ವಿಗ್ರಹದ ಬಳಿ ಎಲ್ಲಾದ್ರೂ ಇದ್ನೆ? ಹುಡುಕಿದ್ವಿ.. ಕುರುಹು ಸಿಗ್ಲಿಲ್ಲ.
ಎರಡನೆ ಗುಹೆಗೆ ಹೋದ್ವಿ. ಅದು ವಿಷ್ಣುವಿಗೆ ಸಂಬಂಧಪಟ್ಟ ದೇವಾಲಯ ಅನ್ನೋದು ಸ್ಪಷ್ಟವಾಗಿತ್ತು. ವರಾಹಾವತಾರ, ತ್ರಿವಿಕ್ರಮಾವತಾರ, ಶೇಷಾಸನ ಮಹಾವಿಷ್ಣು.. ಬೃಹತ್ ಪ್ರತಿಮೆಗಳು ಅಪ್ರತಿಮ. ಚಾಲುಕ್ಯ ಶೈಲಿಯ ಪರಾಕಾಷ್ಠೆ ಇಲ್ಲಿದೆ. ಮಂಗಳೇಶನ ಸಂಸ್ಕೃತ ಶಾಸನವೂ ಇದೆ. ಎಲ್ಲಾನೂ ಇದೆ. ಆದ್ರೆ ವಾತಾಪಿ ಗಣಪತಿಯ ಕುರುಹು ಇಲ್ಲೂ ಸಿಗ್ಲಿಲ್ಲ.
ಮೂರನೆ ಗುಹೆಗೆ ಹೋದ್ವಿ. ಅದು ಮೊದಲ ಎರಡು ಗುಹೆಗಳ ಅಂತರ ಶತಮಾನ ನಂತರ. ಅದು ಜಿನಾಲಯ. ಜೈನ ತೀರ್ಥಂಕರ ಪಾರ್ಶ್ವನಾಥರ ವಿಗ್ರಹಗಳಿದ್ವು. ಅಲ್ಲಿ ಕೂಡ ಎಲ್ಲೂ ವಾತಾಪಿ ಗಣಪತಿ ಸುಳಿವಿಲ್ಲ. ಬೆಟ್ಟದ ತುದಿಯಿಂದ ಅಗಸ್ತ್ಯ ಸರೋವರ ಹಸಿರಾಗಿ ಕಾಣುತ್ತಿತ್ತು.
ಆ ಕಡೆ ತುದಿಯಲ್ಲಿ ಒಂದು ದೇವಸ್ಥಾನ. ಭೂತನಾಥೇಶ್ವರ ಅಂತೆ. ಈ ಕಡೆ ಆರಂಭದಲ್ಲಿ ಒಂದು ಮಸೀದಿ. ಮಧ್ಯೆಯ ಕೋಟೆಯ ದ್ವಾರದ ರಚನೆಗುಂಟ ಹುಡುಕೊಂಡು ಹೋದ್ವಿ.. ಸರೋವರದ ಬುಡದಲ್ಲಿ. ಅಲ್ಲೂ ವಾತಾಪಿ ಗಣಪತಿ ಇದ್ದ ಕುರುಹು ಕಾಣ್ಲಿಲ್ಲ.
ಬಾದಾಮಿ ಗುಹಾಂತರ್ದೇವಾಲಯದ ಎಲ್ಲ ಶಿಲ್ಪಗಳ ಬಣ್ಣವೂ ಕಂದು. ಬಾದಾಮಿ ಬಣ್ಣ. ಅದ್ಕೆ ಈ ಊರಿಗೆ ಬಾದಾಮಿ ಅನ್ನೋ ಹೆಸರು. ಆದ್ರೆ ತಿರುಚಂಕಟ್ಟಂಕುಡಿಲಿರೋ ವಿಗ್ರಹ ಕಪ್ಪುಶಿಲೆಯದು. ಇದು ಒಂದಕ್ಕೊಂದು ತಾಳೆ ಆಗ್ತಿಲ್ವಲ್ಲ ಅನ್ನಿಸ್ತು. ಅಷ್ಟರಲ್ಲಿ ಬಿಜಾಪುರದ ಕಟ್ಟಡವಿನ್ಯಾಸ ಇತಿಹಾಸಜ್ಞ ಪ್ರೊ. ಸತೀಶ್ ದೇಶಮುಖ ಸಿಕ್ರು. ಅವ್ರು ಒಂದು ತರ್ಕ ಮುಂದಿಟ್ರು. ಅದು ಬಾದಾಮಿ ಸಾಮ್ರಾಜ್ಯದಲ್ಲಿ ಎಲ್ಲಿ ಬೇಕಾದರೂ ಸಿಕ್ಕಿರಬಹುದು.. ಕಲ್ಯಾಣದಲ್ಲೂ ಕಪ್ಪು ಕಲ್ಲುಗಳು ಲಭ್ಯ ಅಂತ.
ಹಾಗಾದ್ರೆ ವಾತಾಪಿ ಗಣಪತಿ, ಈ ಬಾದಾಮಿ ಸಾಮ್ರಾಜ್ಯದಲ್ಲಿ ಎಲ್ಲಿ ವಿರಾಜಮಾನನಾಗಿದ್ದ? ಪ್ರಶ್ನೆಗೆ ಉತ್ತರ ಸಿಗುವ ತನಕ ಹುಡುಕ್ತನೇ ಇರೋಣ. ಕನ್ನಡ, ಕರುನಾಡಿನ ಇಂಥ ರೋಮಾಂಚಕ ಅಧ್ಯಾಯಗಳಿಗಾಗಿ ನೋಡ್ತನೇ ಇರಿ ದೃಶ್ಯಕಾವ್ಯ ಕನ್ನಡ ಯುಟ್ಯೂಬ್ ವಾಹಿನಿ.









