ಪ್ರಯಾಗರಾಜ್ನ ಮಹಾಕುಂಭಮೇಳ ಅವಧಿಯಲ್ಲಿ ಕಾಶಿಗೂ ಕೋಟ್ಯಂತರ ಭಕ್ತರು ಭೇಟಿ ನೀಡಿದ್ದರು ಅನ್ನೋದನ್ನ ಕೇಳಿದ್ದಿರಿ. ಇದರಿದಾಗಿ ಕೋಟ್ಯಂತರ ರುಪಾಯಿ ಹಣದ ಹೊಳೆನೂ ಹರಿದಿದೆ. ಸಣ್ಣಪುಟ್ಟ ವ್ಯಾಪಾರಕ್ಕೆ ನಿಂತವರೆಲ್ಲ ಲಕ್ಷ ಲಕ್ಷ ದುಡ್ಡು ಎಣಿಸಿದ್ದು ಶಿವನ ಅನುಗ್ರಹವೇ ಸೈ.
ಅದು ಹೇಗೆ? ಒಂದು ಪುಟ್ಟ ಅಂಕಿಅಂಶ ನೋಡೋಣ.. ದೊಡ್ಡ ದುಡ್ಡಿನ ವಿಷಯ ಅರ್ಥ ಆಗುತ್ತದೆ.
- ಕುಂಭಮೇಳ ಅವಧಿಯಲ್ಲಿ ಕಾಶಿಯೊಂದರಲ್ಲೇ ೧೦೦ ಕೋಟಿ ರೂಪಾಯಿ ಮೌಲ್ಯದ ರುದ್ರಾಕ್ಷಿ ಮಾರಾಟ ಆಗಿದೆ.
- ವಾಸ್ತುದೋಷ ಸರಿಪಡಿಸಲು ಇಡುವ ಕುಬೇರ ಪ್ರತಿಮೆಗಳ ಮಾರಾಟ ೫೦ ಕೋಟಿ.
- ೫ ಸಾವಿರ ಮನೆಗಳು ಹೋಮ್ ಸ್ಟೇಗಳಾಗಿ ಬದಲಾಗಿದ್ದವು. ಎಲ್ಲಾ ೪೫ ದಿನವೂ ಭರ್ತಿಯಾಗಿದ್ದವು.
- ಪ್ರತಿದಿನ ಸರಾಸರಿ ೫ ರಿಂದ ೬ ಲಕ್ಷ ಜನ ಕಾಶಿಯಲ್ಲಿ ಊಟ ಮಾಡಿದ್ದರು. ಇದರಿಂದ ಭೋಜನಾಲಯಗಳಿಗೆ ೪೫ ದಿನಗಳಲ್ಲಿ ಬಂದ ಸರಾಸರಿ ಆದಾಯ ೧೫೭೫ ಕೋಟಿ ರೂಪಾಯಿ.
- ಈ ಅವಧಿಯಲ್ಲಿ ೨೧೫ ಕೋಟಿ ರುಪಾಯಿ ಮೊತ್ತದ ಹೂವು ಮತ್ತು ಹಾರಗಳು ಮಾರಾಟವಾದವು.

ಕಾಶಿ ನಗರದಲ್ಲಿ, ಗಂಗಾ ಘಾಟ್ಗಳಲ್ಲಿ ಹಣೆಗೆ ತಿಲಕ ಇಡುವ ಪಂಡಿತರು ಸಾವಿರಾರು ಮಂದಿ. ತಿಲಕ ಇರಿಸಿ ಇರಿಸಿ ಇವರೆಲ್ಲ ಸಂಪಾದಿಸಿದ್ದೆಷ್ಟು ಗೊತ್ತಾ? ಒಟ್ಟೂ ೩೦ ಕೋಟಿ ರೂಪಾಯಿಗೂ ಹೆಚ್ಚು. ಕಾಶಿಯಲ್ಲಿ ರುದ್ರಾಕ್ಷಿ ಮಾರಾಟದ ೪೫೦ಕ್ಕೂ ಅಧಿಕ ಮಳಿಗೆಗಳಿವೆ. ಇವುಗಳಲ್ಲಿ ಕನ್ನಡಿಗರ ಅಂಗಡಿಗಳೂ ಇವೆ. ಮಹಾಕುಂಭಮೇಳ ಅವಧಿಯಲ್ಲಿ ನಲವತ್ತೈದೂ ದಿನ ದಿನದ ೨೪ ಗಂಟೆಯೂ ವ್ಯಾಪಾರ ಮಾಡಿ ಮಾಡಿ ಸುಸ್ತಾದರು. ಸುಸ್ತಲ್ಲಿ ಖುಷಿಯೂ ಆದರು. ಕಾರಣ ಅವರ ಖಜಾನೆಗೆ ೧೦೦ ಕೋಟಿ ರೂಪಾಯಿಗೂ ಹೆಚ್ಚಿನ ದುಡ್ಡು ಜಮೆ ಆಗಿತ್ತು! ಪ್ರಯಾಗರಾಜ್ನಲ್ಲಿ ಸರಗಳ ವ್ಯಾಪಾರಿ ಮೊನಾಲಿಸಾ ವ್ಯಾಪಾರ ಇಲ್ಲದೇ ಕೊರಗುತ್ತ ಫೋಟೊಗೆ ಫೋಸ್ ಕೊಡ್ತ ರೂಪದರ್ಶಿನೇ ಆದ್ರೆ ಕಾಶಿಲಿ ರುದ್ರಾಕ್ಷಿ, ಮುತ್ತು, ಮಣಿಗಳ ವ್ಯಾಪಾರ ಜೋರಿತ್ತಲ್ಲ.
ಇನ್ನು ಹೊಟೆಲ್ ವಿಷಯ ಕೇಳುವುದೇ ಬೇಡ. ಸಣ್ಣಪುಟ್ಟವು ಸೇರಿ ಕಾಶಿಲಿ ೧೨ ಸಾವಿರ ಹೊಟೆಲ್, ಲಾಡ್ಜ್ ಗಳಿವೆ. ೪೫ ದಿನಗಳ ಅವಧಿಯಲ್ಲಿ ಸರಾಸರಿ ೫ ಲಕ್ಷ ಜನರು ಲಾಡ್ಜ್ಗಳಲ್ಲಿ ವಸತಿ ಮಾಡಿದ್ದರು. ಈ ಅವಧಿಯಲ್ಲಿ ೯೦ ಸಾವಿರ ಕೋಣೆಗಳು ಬುಕ್ ಆದವಂತೆ. ಇದರಿಂದ ಲಾಡ್ಜ್ಗಳಿಗೆ ಬಂದ ಆದಾಯ ಒಟ್ಟೂ ಸರಾಸರಿ ೧೬೨೦ ಕೋಟಿ ರೂಪಾಯಿ.
ಮಹಾಕುಂಭ ಸಂದರ್ಭದಲ್ಲಿ ಕಿರಾಣಿ ಅಂಗಡಿ ಹಾಗೂ ಜನರಲ್ ಸ್ಟೋರ್ಸ್ನವರು ವ್ಯಾಪಾರ ಇಲ್ಲದೆ ನೊಣ ಹೊಡಿತಾ ಇದ್ದರು. ಅದಕ್ಕಾಗಿ ಎಷ್ಟೋ ಅಂಗಡಿಗಳನ್ನ ಬಂದ್ ಮಾಡಿ ೧೦೦೦ ಕ್ಕೂ ತಾತ್ಕಾಲಿಕ ಭೋಜನಾಲಯವನ್ನಾಗಿ ಮಾರ್ಪಾಡು ಮಾಡಿದ್ದರಂತೆ. ಕೆಲವರು ಹಗಲು ರಾತ್ರಿ ಭೋಜನಾಲಯ ತೆರೆದಿದ್ದರು. ಗೃಹಿಣಿಯರು ತಮ್ಮ ಮನೆಯ ವೆರಾಂಡವನ್ನೇ ಭೋಜನಾಲಯವನ್ನಾಗಿ ಮಾಡಿ ಗ್ರಾಹಕರಿಗೆ ಮನೆಯೂಟ ಬಡಿಸಿದರು. ದುಡ್ಡನ್ನೂ ಎಣಿಸಿದರು.
ಸಿಹಿ ತಿಂಡಿಗಳಿಗೆ ಕೂಡ ವಾರಾಣಸಿ ಖ್ಯಾತವಾಗಿದೆ. ೮೦೦ ಕ್ಕೂ ಅಧಿಕ ಸಿಹಿತಿಂಡಿ ಮಳಿಗೆಗಳು ಮದ್ಯರಾತ್ರಿವರೆಗೂ ವಹಿವಾಟು ನಡೆಸುತ್ತಿದ್ದವು. ಇವರಿಗೆ ಕೈಯೂ ಸಿಹಿ ಬಾಯಿಯೂ ಸಿಹಿ. ಶ್ರಮಕ್ಕೆ ತಕ್ಕ ಪ್ರತಿಫಲ. ೪೫ ದಿನಗಳಲ್ಲಿ ೭೦ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಿಹಿತಿಂಡಿ ಮಾರಾಟ ಆಗಿದ್ದು ಕಾಶಿಯ ಮಟ್ಟಿಗೆ ದಾಖಲೆಯಂತೆ.
ಇನ್ನು ವಾರಾಣಸಿಯ ಗಂಗಾ ನದಿಯಲ್ಲಿ ದೋಣಿ, ಬೋಟ್, ಕ್ರೂಸ್ಗಳ ಸಂಭ್ರಮವೋ ಸಂಭ್ರಮ. ೨೫೦೦ಕ್ಕೂ ಅಧಿಕ ಸಣ್ಣ ಹಾಗೂ ದೊಡ್ಡ ಬೋಟ್ಗಳು, ೧೦ ಲಕ್ಷರಿ ಕ್ರೂಸ್ಗಳು ವಿಶ್ರಾಂತಿ ಇಲ್ಲದೇ ಸಂಚರಿಸಿ ಯಜಮಾನರಿಗೆ ದುಡ್ಡಿನ ಹೊಳೆ ಹರಿಸಿದವು. ಇವುಗಳ ಒಟ್ಟೂ ಗಳಿಕೆ ೪೫ ದಿನಗಳಲ್ಲಿ ೩೨೪೦ ಕೋಟಿ ರೂಪಾಯಿ.

ಕುಂಭಮೇಳ ಅವಧಿಯಲ್ಲಿ ೩೮೪೪ ರೈಲುಗಳಲ್ಲಿ ೫೪ ಲಕ್ಷ ಭಕ್ತರು ಕಾಶಿಗೆ ಬಂದಿಳಿದರು. ಶಿವರಾತ್ರಿ ದಿನ ಕಳೆದ ವರ್ಷ ೧೨ ಲಕ್ಷ ಭಕ್ತರು ಭೇಟಿ ನೀಡಿದ್ದರೆ ಈ ಸಲ ಅದು ದುಪ್ಪಟ್ಟಾಗಿತ್ತು. ಒಟ್ಟೂ ೨೫ ಲಕ್ಷ ಭಕ್ತರು ವಿಶ್ವನಾಥನ ದರ್ಶನ ಮಾಡಿದ್ದು ಒಂದು ದಿನದ ದಾಖಲೆ.
ಕುಂಭಮೇಳದ ಕಾರಣ ಕಾಶಿಗೆ ಬಂದುಹೋದ ವಿದೇಶಿ ಪ್ರವಾಸಿಗರು ಕಮ್ಮಿಯೇನಲ್ಲ. ಅಮೆರಿಕ, ಮಲೇಷ್ಯಾ, ಬ್ರಿಟನ್, ರಷ್ಯಾ, ಇಂಗ್ಲೆಂಡ್, ಯುಕ್ರೇನ್, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನದಿಂದ ಪ್ರವಾಸಿಗರು ಆಗಮಿಸಿದ್ದರು. ಭಾರತದ ದಕ್ಷಿಣ ರಾಜ್ಯಗಳಿಂದ ಈಸಲ ಕಿತ್ತೆದ್ದು ಕಾಶಿ-ಪ್ರಯಾಗಕ್ಕೆ ಹೋಗಿದ್ದು ಒಂದು ದಾಖಲೆ. ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ರಾಜ್ಯಗಳ ಅತಿ ಹೆಚ್ಚು ಪ್ರವಾಸಿಗರು ಕುಂಭಮೇಳದಲ್ಲಿ ಮುಳುಗೆದ್ದರು. ಕಾಶಿಗೂ ಬಂದುಹೋದರು. ಪ್ರತಿದಿನ ೫ ಲಕ್ಷ ಜನರು ವಿಶ್ವನಾಥನ ದರ್ಶನ ಪಡೆದರು.
ಮಾಹಿತಿ ಮೂಲ: ವಿಜಯವಾಣಿ.









