ದೃಶ್ಯಕಾವ್ಯ
Advertisement
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ
No Result
View All Result
 ದೃಶ್ಯಕಾವ್ಯ
No Result
View All Result
Home ಕಥೆಕಟ್ಟೆ

ನಾರದನ ಮದುವೆ

ನಾರದನ ಮದುವೆ

ವಿಷ್ಣುಭಕ್ತ ನಾರದ ಮತ್ತು ಪರ್ವತ ಮುನಿ ಇಬ್ಬರೂ ಆತ್ಮೀಯ ಸ್ನೇಹಿತರು. ಒಮ್ಮೆ ಇಬ್ಬರೂ ಅಯೋಧ್ಯೆಯ ಅರಸ ಅಂಬರೀಶನ ಆಸ್ಥಾನಕ್ಕೆ ಹೋಗುತ್ತಾರೆ.ಅಂಬರೀಶ ಅತ್ಯಂತ ಸತ್ಯಸಂಧ ರಾಜ. ಅವನಿಗೆ ಒಬ್ಬಳೇ ಮಗಳು ಶ್ರೀಮತಿ. ಅತ್ಯಂತ ಸೌಂದರ್ಯವತಿ. ಆಕೆಯನ್ನು ಮದುವೆಯಾಗಬೇಕೆಂದು ಅನೇಕ ದೇಶಗಳ ರಾಜಕುಮಾರರು ಕನಸು ಕಾಣುತ್ತಿರುತ್ತಾರೆ. 

ಇಂಥ ಸುಕುಮಾರಿ ಶ್ರೀಮತಿ, ಅರಮನೆಯ ಪದ್ಧತಿಯಂತೆ ನಾರದ ಮತ್ತು ಪರ್ವತ ಮುನಿಯ ಸೇವೆಗೆ ನಿಯೋಜನೆಗೊಳ್ಳುತ್ತಾಳೆ. ಅದು ಅವರ ಅರಮನೆಯ ಸಂಪ್ರದಾಯ.  ಶ್ರೀಮತಿಯ ಅಪಾರ ಸೌಂದರ್ಯ ಕಂಡು ಮರುಳಾದ ನಾರದ ಮತ್ತು ಪರ್ವತ ಮುನಿಯ ಮನಸ್ಸು ಮೋಹಗೊಳ‍್ಳುತ್ತದೆ. ಮದುವೆ ಆದರೆ ಇವಳನ್ನೇ ಆಗಬೇಕು ಎಂದುಕೊಳ್ಳುತ್ತಾರೆ.

ಇಬ್ಬರೂ ಪರಸ್ಪರ ಸ್ನೇಹಿತರಾದ್ದರಿಂದ ಇಬ್ಬರೂ ಹೇಳಿಕೊಳ್ಳುತ್ತಾರೆ. ಇದರಿಂದ ಅವರ ಸ್ನೇಹದ ಬಳ್ಳಿ ಕಳಚಿಬಿದ್ದು ಸ್ಪರ್ಧೆಯ ಮನೋಭಾವ ಮೂಡುತ್ತದೆ. ಇಬ್ಬರೂ ರಾಜ ಅಂಬರೀಶನ ಬಳಿ ಬರುತ್ತಾರೆ. ಒಬ್ಬೊಬ್ಬರಾಗಿ ತಾವು ಶ್ರೀಮತಿಯನ್ನು ಮದುವೆಯಾಗಬಯಸುವುದಾಗಿ ಹೇಳುತ್ತಾರೆ. ಉಭಯಸಂಕಟಕ್ಕೆ ಸಿಲುಕಿದ ಅಂಬರೀಶ ಒಂದು ಉಪಾಯ ಹೂಡುತ್ತಾನೆ. ನಿಮ್ಮಿಬ್ಬರಲ್ಲಿ ಒಬ್ಬರಿಗೆ ಮಾತ್ರ ಶ‍್ರೀಮತಿಯನ್ನು ಮದುವೆ ಮಾಡಿ ಕೊಡಬಲ್ಲೆ. ಇಬ್ಬರಿಗೂ ಒಂದೇ ಹೆಂಡತಿ ಸಾಧ‍್ಯವಿಲ್ಲ. ಹಾಗಾಗಿ ನಿಮ್ಮಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ನಿರ್ಧಾರವನ್ನು ಶ್ರೀಮತಿಗೇ ಬಿಡುತ್ತೇನೆ. ಅದಕ್ಕಾಗಿ ಸ್ವಯಂವರ ಏರ್ಪಡಿಸುತ್ತೇನೆ. ಶ್ರೀಮತಿ ಯಾರಿಗೆ ಇಷ್ಟವೋ ಅವಳ ಕೊರಳಿಗೆ ವರಮಾಲೆ ಹಾಕುತ್ತಾಳೆ. ಯಾರನ್ನು ವರಿಸಲಿಲ್ಲವೋ ಅವರು ನನ್ನ ಮೇಲೆ ಮುನಿಸಿಕೊಳ್ಳಬಾರದು ಎನ್ನುತ್ತಾನೆ. ಇಬ್ಬರೂ ಒಪ್ಪುತ್ತಾರೆ. 

ಹಿಂದಿರುಗುವಾಗಿ ದಾರಿಯಲ್ಲಿ ನಾರದ ಮತ್ತು ಪರ್ವತ ಮುನಿ ನಡುವೆ ಮಾತಿನ ಚಕಮತಿ ನಡೆಯುತ್ತದೆ. ಇಬ್ಬರೂ ತಾವು ಹೇಗೆ ಶ್ರೇಷ್ಠ ಮತ್ತು ಆಕೆಗೆ ಯೋಗ್ಯ ಗಂಡ ಎಂದು ಸಮರ್ಥಿಸಿಕೊಳ್ಳುತ್ತ ಸಾಗುತ್ತಾರೆ. ಒಂದು ಹಂತದಲ್ಲಿ ಪರ್ವತ ಮುನಿ, ತಾನು ನಾರದನಿಗಿಂತ ತುಂಬ ಕಡಿಮೆ ವಯಸ್ಸಿನ, ಯೌವನ ತುಂಬಿರುವ ಪುರುಷ. ನನ್ನ ಯೌವನದ ಮುಂದೆ ನಿನ್ನ ಈ ರೂಪ ಆಕೆಗೆ ಇಷ್ಟವಾಗಲು ಸಾಧ್ಯವೇ ಇಲ್ಲ ಎನ್ನುತ್ತಾನೆ. ಇದು ನಾರದ ತಲೆಗೆ ಹುಳ ಬಿಟ್ಟಂತೆ ಆಗುತ್ತದೆ.

ನಾರದ ನೀರಿನ ಬಿಂಬದಲ್ಲಿ ತನ್ನ ರೂಪ ನೋಡಿಕೊಳ್ಳುತ್ತಾನೆ. ಯೋಚಿಸುತ್ತಾನೆ. ಪರ್ವತ ಮುನಿ ಬಲಿಷ್ಠವಾಗಿದ್ದಾನೆ. ತಾನೋ ನರಪೇತಲ. ತಲೆಬಿಸಿ ಜಾಸ್ತಿಯಾಗುತ್ತದೆ. ಕೊನೆಗೆ ವಿಷ್ಣುವಿನ ಮೊರೆ ಹೋಗುತ್ತಾನೆ. ವಿಷ್ಣು ಬಳಿ ಬಂದು ಎಲ್ಲವನ್ನೂ ವಿವರಿಸಿ, ಪರ್ವತ ಮುನಿಯ ಮುಖವನ್ನು ಶ್ರೀಮತಿ ನೋಡಿದಾಗ ಕೋತಿಮುಖವಾಗುವಂತೆ ವರಕೊಡು ಎನ್ನುತ್ತಾನೆ. ವಿಷ್ಣು ಮುಗುಳ್ನಕ್ಕು ತಥಾಸ್ತು ಎನ್ನುತ್ತಾನೆ. 

ಅತ್ತ ಪರ್ವತಮುನಿಗೆ ಎದೆಯಲ್ಲಿ ಡುಕುಡುಕು. ರೂಪ ನೋಡುವವರ ಕಣ್ಣಿನಲ್ಲಿರುತ್ತದೆ. ನಾರದನ ತೆಳುದೇಹವೇ ಅವಳಿಗೆ ಇಷ್ಟವಾಗಿಬಿಟ್ಟರೆ? ಅದಕ್ಕೇ ವಿಷ್ಣುವಿನ ಮೊರೆ ಹೋಗುತ್ತಾನೆ. ಶ್ರೀಮತಿಯನ್ನು ನಾನು ಮದುವೆಯಾಗಬೇಕು. ಆದರೆ ನಾರದನೂ ಬಯಸಿದ್ದಾನೆ. ಅವನಿಗೆ ಆಕೆ ದಕ್ಕಬಾರದು. ಆಕೆ ಇಲ್ಲದೇ ನನ್ನ ಜೀವನ ಶೂನ್ಯ. ಅದಕ್ಕಾಗಿ ಒಂದು ವರ ಕೊಡಿ, ಸ್ವಯಂವರ ಸಂದರ್ಭ ನಾರದನ ಮುಖ ಕರಡಿ ಮುಖದಂತೆ ಆಕೆಗೆ ಕಾಣಲಿ ಎಂದು ಬೇಡುತ್ತಾನೆ. ವಿಷ್ಣು ತಥಾಸ್ತು ಎನ್ನುತ್ತಾನೆ. 

ಸ್ವಯಂವರದ ದಿನ ಇಬ್ಬರೂ ಗತ್ತಿನಿಂದ ಕುಳಿತಿದ್ದಾರೆ. ಶ್ರೀಮತಿ ವರಮಾಲೆ ಹಿಡಿದು ಬರುತ್ತಾಳೆ. ಇಬ್ಬರನ್ನೂ ನೋಡಿದಕೂಡಲೆ ಘೊಳ್ಳನೆ ನಕ್ಕುಬಿಡುತ್ತಾಳೆ. ನಗುತ್ತ ತಂದೆಗೆ ಹೇಳುತ್ತಾಳೆ- ಅಪ್ಪ, ಇಬ್ಬರಲ್ಲಿ ಯಾರೊಬ್ಬರೂ ನನಗೆ ಹಿಡಿಸುತ್ತಿಲ್ಲ. ಒಬ್ಬ ಕೋತಿ, ಮತ್ತೊಬ್ಬ ಕರಡಿ.. ಎನ್ನುತ್ತಾಳೆ. ಅಂಬರೀಶ ನೋಡಿದರೆ ಅಲ್ಲಿ ನಾರದ, ಪರ್ವತಮುನಿ. ಮಧ್ಯೆ ಥಳ ಥಳ ಹೊಳೆಯುವ ಪ್ರಕಾಮಾನವಾದ ಚತುರ್ಭುಜ ವಿಷ್ಣು. ಆದರೆ ಶ್ರೀಮತಿ ಹೊರತು ಯಾರಿಗೂ ಗೋಚರವಾಗುತ್ತಿಲ್ಲ.  

ಶ್ರೀಮತಿ  ಹೇಳುತ್ತಾಳೆ- ಮಧ್ಯೆ ಇದ್ದಾನಲ್ಲ, ಪುರುಷೋತ್ತಮ, ಆತನೇ ನನ್ನ ವರೋತ್ತಮ ಎನ್ನುತ್ತಾಳೆ. ಅಂಬರೀಶ ಕಣ್ಣಿನಲ್ಲೇ ಅನುಮತಿ ಸೂಚಿಸುತ್ತಾನೆ. ಶ‍್ರೀಮತಿ ವರಮಾಲೆ ಹಿಡಿದು ಬಳಿ ಬರುತ್ತಾಳೆ. ಇಬ್ಬರೂ ಆಸೆಗಣ್ಣಿನಿಂದ ನೋಡುತ್ತಾರೆ. ಶ್ರೀಮತಿ ನಸುನಗುತ್ತ ಮಧ್ಯೆ ಗಾಳಿಯಲ್ಲಿ ಮಾಲೆ ಹಾಕುತ್ತಾಳೆ. ಮಾಲೆ ಹಾಕಿದ ತಕ್ಷಣ ವಿಷ್ಣು ಪ್ರಕಟಗೊಳ‍್ಳುತ್ತಾನೆ. 

ನಾರದ ಹಾಗೂ ಪರ್ವತಮುನಿಗೆ ಅವಮಾನದ ತುರೀಯಾವಸ್ಥೆ. ನಾರದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಷ್ಣುವಿಗೆ ಶಾಪ ಕೊಡುತ್ತಾನೆ. – ತನ್ನನ್ನು ಮಂಗ ಮಾಡಿದ ನೀನು ಮುಂದೆ ನರಜನ್ಮ ತಾಳಿ, ಮಂಗಗಳ ಸಹಾಯವನ್ನೇ ಪಡೆಯುವಂಥ ಪ್ರಸಂಗ ಬರಲಿ ಅಂತ. ಪರ್ವತ- ಕರಡಿಯ ಸಹಾಯ ಪಡೆವಂತಾಗಲಿ ಎನ್ನುತ್ತಾನೆ. 

ನಸುನಕ್ಕ ವಿಷ್ಣು, ಮುಂದೆ ತಾನು ರಾಮಾವತಾರ ತಳೆಯಲಿದ್ದು, ಅಲ್ಲಿ ನೀವು ಕೊಟ್ಟ ಶಾಪ ನಿಜವಾಗುತ್ತದೆ. ನನ್ನ ಲೋಕಕಲ್ಯಾಣಕ್ಕೆ ನೀವಿತ್ತ ಶಾಪವೇ ವರವಾಗಿ ಬಳಕೆಯಾಗಲಿದೆ ಎಂದು ನಸುನಗುತ್ತ ಹೇಳುತ್ತಾನೆ. ಇಬ್ಬರಿಗೂ ಜ್ಞಾನೋದಯವಾಗುತ್ತದೆ. ನಾಚಿಕೆಯಾಗುತ್ತದೆ. ವಿಷ್ಣುವಿನ ಕ್ಷಮೆ ಕೇಳುತ್ತಾರೆ. 

ವಿಷ್ಣು ಹೇಳುತ್ತಾನೆ- ಸಂಸಾರ ಎನ್ನುವುದು ಮಾಯೆ. ಇದರ ವಶದಲ್ಲಿ ಸಿಲುಕಿ ನೀವೂ ಸಾಮಾನ್ಯ ಮನುಷ್ಯರಂತೆ ಹೇಗೆ ವರ್ತಿಸಿದಿರಿ ನೋಡಿ.  ಈ ಶ್ರೀಮತಿ ಬೇರೆ ಯಾರೂ ಅಲ್ಲ. ಲಕ್ಷ್ಮಿಯ ಪ್ರತಿರೂಪ. ಹಾಗಾಗಿ ನನ್ನನ್ನೇ ಸೇರುವಂತಾಯ್ತು. ಯಾರಿಗೆ ಯಾರು ಲಭ್ಯ ಎಂದು ವಿಧಿಲಿಖಿತವಿದೆಯೋ ಅದೇ ದಕ್ಕುವುದು ಎಂದು ಹೇಳಿ ಶ್ರೀಮತಿಯೊಂದಿಗೆ ಅಂತರ್ಧಾನನಾಗುತ್ತಾನೆ. ಪರ್ವತ- ನಾರದ ವಿಷ್ಣುವಿಗೆ ಸಂಪೂರ್ಣ ಶರಣಾಗುತ್ತಾರೆ.  

 

  • ವಿಭ
Share7Tweet4SendShareShare
Next Post
Pic: Noufal Thottathil & Veda

ಗಾರ್ಗಿಯ ಡೈರಿಯಿಂದ-3

Comments 1

  1. Vanishree Anekere says:
    1 year ago

    🤩🤩

    Reply

Leave a Reply Cancel reply

Your email address will not be published. Required fields are marked *

Recommended

ಅಂತಿಮ ವಿದಾಯದ ಕಾಫಿ!

ಅಂತಿಮ ವಿದಾಯದ ಕಾಫಿ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಕಾಶಿಯ ಡೋಮ್‌ ಜನರು; ಅಂತ್ಯ ಸಂಸ್ಕಾರವೇ ಬದುಕು

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ತಾಯ್ನೆಲದಲ್ಲೇ ನಿರಾಶ್ರಿತರಾದ ಕಾಶ್ಮೀರಿ ಪಂಡಿತರ ಕಥೆ-ವ್ಯಥೆ!

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಒಮ್ಮೆ ಯೋಚಿಸಬೇಕಿತ್ತು ಅಂಬೆ !

ಹೂ ಮತ್ತು ಹುಡುಗಿ

ಹೂ ಮತ್ತು ಹುಡುಗಿ

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಕಚ್ಚುವ ನಾಯಿಗೆ ಬಿರಿಯಾನಿ, ಹಾಲು ಕೊಡುವ ದನಗಳಿಗೆ ಹುಲ್ಲಿಲ್ಲ!

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟಿತು

Translate »
No Result
View All Result
  • ಜಗುಲಿ
  • ಪರಂಪರೆ
  • ಗಹನ
  • ಸಿನಿಗಂಧ
  • ಕಥೆಕಟ್ಟೆ
  • ಹಾಯಿದೋಣಿ
  • ಬಾಲಕಾಂಡ
  • ಕಾಲೇಜುಕಟ್ಟೆ
  • ನಮ್ಮ ಪ್ರವರ

© 2026 JNews - Premium WordPress news & magazine theme by Jegtheme.