ಇಲ್ಲಿನ ಕಲ್ಲು ಕಟ್ಟಡಗಳು ಗತಕಾಲದ ಕಥೆ ಹೇಳುತ್ತವೆ. ಪಾಳು ಬಿದ್ದ ನಾಟ್ಯಮಂದಿರದಲ್ಲಿ ನರ್ತಕಿಯ ಗೆಜ್ಜೆ ಸದ್ದು ಈಗಲೂ ಮೊಳಗುತ್ತಿದೆಯೇನೋ ಅನ್ನಿಸುತ್ತೆ. ರಾಜಮಹಲಿನಲ್ಲಿ ಸುಳಿದಾಡುವ ಗಾಳಿ ಏನೋ ದುರಂತ ಕತೆಯ ಸುಳಿವು ನೀಡುತ್ತದೆ. ಇಲ್ಯಾರೋ ಪ್ರೇಮಿಗಳು ಆತ್ಮಹತ್ಯೆ ಮಾಡ್ಕೊಂಡಿದ್ರಂತೆ.. ಅವರ ಆತ್ಮ ಈಗಲೂ ಅಲ್ಲಿ ಅಡ್ಡಾಡ್ತಿದೆ ಅಂತಾರೆ. ಒಟ್ನಲ್ಲಿ ನಮ್ಮ ಹೆಜ್ಜೆಯ ಸದ್ದೇ ನಮಗೆ ಭಯ ಹುಟ್ಟಿಸುವಂಥ ವಾತಾವರಣ. ಇದು ಸ್ವತಂತ್ರ ಭಾರತದಲ್ಲಿ ಸ್ವಇಚ್ಛೆಯಿಂದ ವಿಲೀನಗೊಂಡ ದೇಶದ ಮೊಟ್ಟಮೊದಲ ಸಂಸ್ಥಾನ ಜಮಖಂಡಿಯ ಪಟವರ್ಧನ ಮಹಾರಾಜರ ಸಂಸ್ಥಾನದ ಇವತ್ತಿನ ನೋಟ. ಹೇಗಿತ್ತು-ಹೇಗಾಯ್ತು? ಏನಾಯ್ತು? ಯಾಕಾಯ್ತು? ಈ ಬಗ್ಗೆ ವಿವರ ಕೊಡ್ತೀವಿ.
ಮಹಾರಾಷ್ಟ್ರದ ರತ್ನಗಿರಿ ಮೂಲದ ಹರಿಭಟ್ಟ ಅನ್ನೋವರು ಪಟವರ್ಧನ ವಂಶದ ಮೂಲ ಪುರುಷರು. ಇವರು ಇಚಲಕರಂಜಿಲಿ ಅರ್ಚಕರಾಗಿದ್ರು. ಇವರ ಮೂವರು ಪುತ್ರರು ಪುಣೆಯ ಪೇಶ್ವೆ ಮಹಾರಾಜರ ಆಡಳಿತದಲ್ಲಿ ಪ್ರಮುಖ ಹುದ್ದೆಲಿದ್ರು. ಅವ್ರೆಲ್ಲ ಧೀರರೂ ಶೂರರೂ ಆಗಿದ್ರು. ಆಗೆಲ್ಲ ಪೇಶ್ವೆ ಆಡಳಿತ ಕರ್ನಾಟಕದ ವರೆಗೂ ಇತ್ತು. ಜಮಖಂಡಿ, ಮೀರಜ್, ಸಾಂಗ್ಲಿ ಹಾಗೂ ಕುರುಂದವಾಡ ಪ್ರದೇಶಗಳನ್ನ ಪೇಶ್ವೆ, ಪಟವರ್ಧನ ಕುಟುಂಬಕ್ಕೆ ಜಹಗೀರಾಗಿ ಕೊಟ್ರು. ಹೀಗೆ ೧೮೧೧ ರಲ್ಲಿ ಗೋಪಾಲರಾವ್ಪಟವರ್ಧನ ಅವರಿಂದ ಈ ರಾಜಸಂಸ್ಥಾನ ಆಳ್ವಿಕೆ ಶುರು ಮಾಡ್ತು. ಅವರ ಪುತ್ರ ರಾಮಚಂದ್ರರಾವ್ಪಟವರ್ಧನ ಅಧಿಕಾರಕ್ಕೆ ಬಂದಮೇಲೆ ತುಂಬ ಜನಪರ ಕೆಲಸ ಮಾಡಿದ್ರು. ಅಲ್ಲದೇ, ಈಗ ಹಾಳುಹಂಪಿ ಥರ ಕಾಣ್ತಿದೆಯಲ್ಲ.. ಇದು ರಾಮತೀರ್ಥ ಅನ್ನೋ ಜಾಗ. ಇಲ್ಲಿ ಒಂದು ಸಂಕೀರ್ಣವನ್ನೇ ನಿರ್ಮಿಸಿದ್ರು. ಮಧ್ಯದಲ್ಲಿ ಬುರುಜು ಇದ್ಯಲ್ಲ, ಇದು ಮಹಾರಾಜರ ಅರಮನೆ. ಕಲ್ಲು ಹಾಗೂ ಗಾರೆಲಿ ನಿರ್ಮಿಸಿದ್ದು. ಇವ್ರು ಯುರೋಪ್ವಾಸ್ತು ಶೈಲಿಲಿ ಈ ಅರಮನೆ ಕಟ್ಸಿದ್ದು.. ಈಗ ಎಲ್ಲಾ ಶಿಥಿಲವಾಗಿದೆ.. ಗವ್ಅನ್ನುತ್ತೆ.. ಒಳಗೆ ಹೋಗೋಕೆ ಭಯ ಆಗುತ್ತೆ. ಮಹಡಿಮೇಲೆ ಹೋಗೋಕೆ ಅನುಮತಿ ಇಲ್ಲ.
ಈ ಅರಮನೆ ಎಡಭಾಗದಲ್ಲಿ ಮೂರು ಹಂತದಲ್ಲಿ ಹರಪ್ಪ ಮೊಹೆಂಜೊದಾರೊ ಥರ ಪಟ್ಟಣ ರಚಿಸಲಾಗಿದೆ.
ಇದು ಮೋಹಿನಿ ನಾಟ್ಯಮಂದಿರ. ಮನರಂಜನೆಗೆ. ಇದರಲ್ಲಿ ಸಾವಿರ ಜನ ಕೂತರೂ ಎಲ್ಲರಿಗೂ ಸಂಭಾಷಣೆ ಕೇಳೋಹಾಗೆ ಧ್ವನಿವಿನ್ಯಾಸ ತಾಂತ್ರಿಕತೆ ಅಳವಡಿಸಿದ್ರಂತೆ.
ಇವು ಮಂತ್ರಿಗಳು, ಸೇನಾಧಿಪತಿಗಳು ಇತ್ಯಾದಿ ಉಳಿದುಕೊಳ್ಳೋಕೆ ಮಹಲುಗಳು. ಎರಡು ಹಂತಗಳಲ್ಲಿವೆ. ಹಿಂದುಗಡೆ, ಇರುವ ಹೆಂಚಿನ ಪುಟ್ಟಪುಟ್ಟ ಮನೆಗಳು ಬಹುಶಃ ಸೇವಕರಿಗೆ ಪರಿಚಾರಕರಿಗೆ ಅನ್ಸುತ್ತೆ.
ಇಲ್ಲಿ ಬಳಸಿರೋ ಗುಲಾಬಿ ಬಣ್ಣದ ಕಲ್ಲುಗಳೇ ಅಂದ. ಗಾರೆ ಕಬ್ಬಿಣಗಳನ್ನೂ ಬಳಸಲಾಗಿದೆ.
ಎರಡನೆ ಹಂತದಲ್ಲೂ ಇದೇ ರೀತಿ ಮಹಲು, ಮನೆಗಳು.
ಮೂರನೆ ಹಂತದಲ್ಲಿರೋದು ಈಜುಕೊಳ. ಇದಕ್ಕೆ ನೀರುಪೂರೈಕೆ ದೂರದಲ್ಲಿ ಕೆರೆಯಿಂದ ಆಗ್ತಿತ್ತಂತೆ.
ಜಮಖಂಡಿ ಸಂಸ್ಥಾನದ ಮೂರನೆ ರಾಜರು ಪರಶುರಾಮರಾವ್ಪಟವರ್ಧನ್.ಹಿಂದಿನ ರಾಮಚಂದ್ರರಾವ್ರ ದತ್ತುಪುತ್ರ. ಭಾವೂಸಾಹೇಬ್ಅಂತನೂ ಕರಿತಿದ್ರು. ಇವರು ವಿದೇಶಗಳಲ್ಲೂ ವ್ಯಾಸಂಗ ಮಾಡಿದ್ರು. ಬ್ರಿಟಿಷ್ದೊರೆಯಿಂದ ʻನೈಟ್ಕಮಾಂಡರ್ಆಫ್ದಿ ಮೋಸ್ಟ್ಎಮಿನೆಂಟ್ಆರ್ಡರ್ಆಫ್ದಿ ಇಂಡಿಯನ್ಎಂಪೈರ್ʼ ಗೌರವ ಪಡೆದ ರಾಜ ಇವರು. ಎರಡನೆ ವಿಶ್ವಯುದ್ಧ ಕಾಲದಲ್ಲಿ ರೆಡ್ಕ್ರಾಸ್ಸಂಸ್ಥೆ ಕೆಲಸಗಳ ವರದಿ ಮಾಡೋಕೆ ಪ್ರಾನ್ಸ್, ಮೆಸಪಟೋಮಿಯ ಎಲ್ಲ ಸುತ್ತಿದ್ರು.
ಇವರ ಪುತ್ರ ಶಂಕರರಾವ್ಪಟವರ್ಧನ್. ಅಪ್ಪಾಸಾಹೇಬ್ಅಂತ ಜನ ಕರೀತಿದ್ರು. ಬಹುಶಃ ಇವರ ಜೀವನ ದುರಂತ ಅಂತ್ಯ ಕಂಡಿದ್ದು, ಇಡೀ ಸಂಸ್ಥಾನಕ್ಕೆ ಅಭಿಶಾಪವಾಗಿರಬಹುದು. ಒಂದು ಉತ್ಸವದಲ್ಲಿ ಆನೆಯನ್ನು ಕರೆಸಿದ್ರಂತೆ. ಮದವೇರಿದ ಆನೆ, ಮಹಾರಾಜರಾಗಿದ್ದ ಅಪ್ಪಾಸಾಹೇಬ್ರನ್ನೇ ತುಳಿದು ಕೊಂದು ಹಾಕಿಬಿಡ್ತು.
ಆಮೇಲೆ ಅಧಿಕಾರಕ್ಕೆ ಬಂದವರು ಐದನೇ ಮಹಾರಾಜ ಪರುಶಾರಮ ಪಟವರ್ಧನ. ಇವರು ಈ ಸಂಸ್ಥಾನದ ಕೊನೆ ಮಹಾರಾಜರು. ಭಾರತ ಸ್ವಾತಂತ್ರ್ಯ ಬಂದಾಗ ವಂಶಸ್ಥರ ವಿರೋಧವನ್ನೂ ಲೆಕ್ಕಿಸದೇ, ಸಂಸ್ಥಾನವನ್ನು ದೇಶದಲ್ಲಿ ವಿಲೀನ ಮಾಡಲು ಸಹಿ ಹಾಕಿದ ಮೊತ್ತಮೊದಲ ದೊರೆ. ಹೀಗೆ ಸಹಿ ಹಾಕಲು ಪ್ರೇರಣೆ, ಅವರ ಸಚಿವರೂ ಆಗಿದ್ದ, ನಂತರ ಭಾರತದ ಉಪರಾಷ್ಟ್ರಪತಿಗಳಾದ ಡಾ.ಬಿ.ಡಿ.ಜತ್ತಿ. ಸಹಿ ಹಾಕುವಾಗ ಅವರಿಟ್ಟ ಬೇಡಿಕೆ – ಜಮಖಂಡಿ ಜಿಲ್ಲೆಯಾಗಬೇಕು ಅಂತ. ಅದು ಇನ್ನೂ ಈಡೇರಿಲ್ಲ!
ಪರಶುರಾಮ್ ಅವರ ಸೋದರಿ ಇಂದುಮತಿ ಪಟವರ್ಧನ್ ಆ ಕಾಲದಲ್ಲೇ ಹೋಮಿಯೋಪತಿ ಅಧ್ಯಯನ ಮಾಡಿ ಮುಂಬಯಿಯಲ್ಲಿ ಕೆಲಸ ಮಾಡಿದವರು. ಗಾಂಧೀಜಿಯವರ ಚಳುವಳಿಯಲ್ಲಿ ಭಾಗವಹಿಸೋಕೆ ಸಾಬರಮತಿ ಆಶ್ರಮಕ್ಕೆ ತೆರಳಿದ್ರು. ಎರಡನೆ ವಿಶ್ವಯುದ್ಧದಲ್ಲಿ ರೆಡ್ಕ್ರಾಸ್ ಸ್ವಯಂಸೇವಿಕೆಯಾಗಿ ಬರ್ಮಾದಲ್ಲಿ ಕೆಲಸ ಮಾಡಿದ್ರು. ದಕ್ಷಿಣಪೂರ್ವ ಏಷ್ಯದಲ್ಲಿ ಈರೀತಿ ಕೆಲಸ ಮಾಡಿದ ಮೊದಲ ಮಹಿಳೆ ಇವರು. ಭಾರತ ವಿಭಜನೆ ಆದಾಗ ವಲಸೆ ಬಂದ ಸಂತ್ರಸ್ತರ ಸಹಾಯಕ್ಕೆ ಫಿರೋಜ್ಪುರದಲ್ಲಿ ನಿರಾಶ್ರಿತ ಕ್ಯಾಂಪ್ಗಳಲ್ಲಿ ಹಗಲುರಾತ್ರಿ ಕೆಲಸ ಮಾಡಿದ್ರು. ಇವರಿಗೆ ಸ್ವಾತಂತ್ರ್ಯಾನಂತರ, ಮಹಾರಾಷ್ಟ್ರ ಸರಕಾರ ದಲಿತ ಮಿತ್ರ ಪುರಸ್ಕಾರ ನೀಡಿದೆ. ಕರ್ನಾಟಕ ಸರಕಾರ ತಾಮ್ರಪತ್ರ ನೀಡಿ ಗೌರವಿಸಿದೆ.
ಜಂಬುನೇರಳೆ ವನದಲ್ಲಿರುವ ಜಂಬುಕೇಶ್ವರ ದೇವಸ್ಥಾನದಿಂದ ಈ ಊರು ಜಂಬುಖಂಡಿ ಅಂತ ಕವಿ ರನ್ನ ಉಲ್ಲೇಖಿಸಿದ್ದಾನೆ. ಅದೇ ಜಮಖಂಡಿ ಆಗಿದೆ. ಇಂಥ ಜಮಖಂಡಿಯಲ್ಲಿ ಕರುನಾಡಿನ ಇತಿಹಾಸ ಕಥನ ಹೇಳುವ ಈ ರಾಮತೀರ್ಥ ಸಂಸ್ಥಾನ ಸಂಕೀರ್ಣವನ್ನು ಕಾಪಾಡಿಕೊಳ್ಳೋದು ಸರಕಾರದ, ಸ್ಥಳೀಯ ಆಡಳಿತದ ಜವಾಬ್ದಾರಿ. ಆದರೆ ಇಲ್ಲಿ ಬೇಜವಾಬ್ದಾರಿಯೇ ತಾಂಡವವಾಡ್ತಿದೆ. ಪಟವರ್ಧನ ಕುಟುಂಬಸ್ಥರೆಲ್ಲ ಪುಣೆ, ಮುಂಬಯಿಯಲ್ಲಿ ನೆಲೆಸಿದ್ದಾರೆ. ಅವರಿಗೆ ಇಲ್ಲಿ ಗುದ್ದಾಡುವುದು ಬೇಕಾಗಿಲ್ಲ. ಅವರಿಂದ ಈ ಸೊತ್ತನ್ನ ಪ್ರಭಾವಿ ರಾಜಕಾರಣಿಯೊಬ್ರು ಜುಜುಬಿ ದರಕ್ಕೆ ಕೊಂಡುಕೊಂಡಿದ್ದಾರಂತೆ. ಅರಮನೆ ಗುರುಮನೆಗಳೆಲ್ಲ ತಾನಾಗೆ ಜರಿದುಬೀಳಲಿ ಅಂತ ಕಾಯ್ತಿದ್ದಾರಂತೆ. ಎಗ್ಗಿಲ್ಲದೇ ಅನೈತಿಕ ಚಟುವಟಿಕೆಗಳು ಇಲ್ಲಿ ನಡಿತಾವೆ. ನೂರಾರು ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಜಮಖಂಡಿ ಸಂಸ್ಥಾನ ಕರುನಾಡ ಪಾರಂಪರಿಕ ತಾಣವಾಗುವ ಅವಕಾಶ ಕಣ್ಣೆದುರೆ ಮಣ್ಣಾಗ್ತಾ ಇದೆ.
ಇದೇ ಕಥನ ವೀಕ್ಷಿಸಲು ದೃಶ್ಯಕಾವ್ಯ ಕನ್ನಡದ ಈ ಯುಟ್ಯೂಬ್ ಲಿಂಕ್ ಕ್ಲಿಕ್ಕಿಸಿ.









