ಕಾಶಿಯ ಜ್ಞಾನವಾಪಿ ಮಸೀದಿಯಡಿ ಉತ್ಖನನ ಮಾಡಿದಾಗ ಕನ್ನಡ ಬರಹಗಳು ಇರುವ ಕಲ್ಲು ಸಿಕ್ಕಿರುವುದು ದೊಡ್ಡ ಸುದ್ದಿಯಾಗಿತ್ತು. ಅಲ್ಲಿ ಸಧ್ಯ ದೊರಕಿದ್ದು ಎರಡೇ ಹೆಸರು ಕೆತ್ತಿದ ಕಲ್ಲುಗಳು..ಆದರೆ ಕಾಶಿಯಲ್ಲಿ ದೊರೆತ ಮೊತ್ತಮೊದಲ ಕನ್ನಡ ಶಾಸನ ಇದಲ್ಲ. ಇದಕ್ಕೂ ಮೊದಲು ಕನ್ನಡದ ಶಾಸನ ಕನ್ನಡದ ಮಠವೊಂದರಲ್ಲಿ ಸಿಕ್ಕಿದೆ. ಅದು ಯಾವುದು.. ಅದರಲ್ಲೇನಿದೆ ಮತ್ತೆ ಮೆಲುಕು ಹಾಕೋಣ..
ಮೊದಲು ಜ್ಞಾನವಾಪಿ ಮಸೀದಿಕಟ್ಟಡದಲ್ಲಿ ಏನಿದೆ ನೋಡೋಣ. ಅದರಲ್ಲಿ ʻದೊಡ್ಡರಸಯ್ಯನ ನರಸಂಣನ ಭಿಂನ್ನಹʼ ಅಂತ ಕೆತ್ತಿರುವುದು ಪತ್ತೆಯಾಗಿದೆ. ಅದೂ ಶಿಲಾಸಾನವಾಗಿ ಅಲ್ಲ.. ಜ್ಞಾನವಾಪಿ ಕಟ್ಟಡದ ವಾಯವ್ಯ ಮೂಲೆಯಲ್ಲಿರುವ ಕಲ್ಲಿನ ಗೋಡೆಯ ಮೇಲೆ ಪತ್ತೆಯಾಗಿರುವುದು. ಅವರ ಭಿನ್ನಹ ಏನು ಎನ್ನುವ ಪೂರ್ಣಪಾಠ ಸಿಕ್ಕಿಲ್ಲ. ೩೨ ಶಿಲಾಶಾಸನಗಳನ್ನು ಪತ್ತೆ ಹಚ್ಚಿದ ಪ್ರಾಚ್ಯವಸ್ತು ಸಂಶೋಧಕರ ಪ್ರಕಾರ ಔರಂಗಜೇಬ ಆದಿ ವಿಶ್ವನಾಥ ದೇವಸ್ಥಾನ ನೆಲಸಮ ಮಾಡುವಾಗ ಹಲವು ಶಾಸನಗಳೂ ನಾಶವಾಗಿರಬಹುದು. ಅದರಲ್ಲಿ ಈ ಶಾಸನವೂ ಇದ್ದಿರಬಹುದು. ಯಾಕೆಂದರೆ, ಆ ಭಿಂನ್ನಹ ಏನಿತ್ತು ಎನ್ನುವ ವಿಷಯ ಕೆತ್ತಿರಲೇಬೇಕು ಎನ್ನುತ್ತಾರೆ ಇತಿಹಾಸ ತಜ್ಞರು.
ಬರಹದ ಶೈಲಿ ನೋಡಿದರೆ ವಿಜಯನಗರ ಕಾಲದಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ವ್ಯಕ್ತಿಗಳಾಗಿರಬಹುದು, ವ್ಯಾಪಾರಸ್ಥರಾಗಿರಬಹುದು, ಶ್ರೀಮಂತರಾಗಿರಬಹುದು ಈ ದೊಡ್ಡರಸಯ್ಯ ಮತ್ತು ನರಸಣ್ಣ ಎಂದು ಅಂದಾಜು ಮಾಡಲಾಗಿದೆ. ೧೫-೧೬ನೆಯ ಶತಮಾನದ ಶಾಸನ ಇದಾಗಿರಬಹುದು. ಯಾಕೆಂದರೆ ಔರಂಗಜೇಬ ದಾಳಿಮಾಡಿ ಕಾಶಿ ವಿಶ್ವನಾಥ ಮಂದಿರವನ್ನು ವಶಪಡಿಸಿಕೊಂಡು ಕೆಡವಿ ಮಸೀದಿಯನ್ನಾಗಿ ಪರಿವರ್ತಿಸಿದ್ದು ೧೭ ನೆಯ ಶತಮಾನದಲ್ಲಿ !
ಕಾಶಿಯಲ್ಲಿ ಕಳೆದ ೨೫೦ ವರ್ಷಗಳಿಂದ ಕನ್ನಡದ ಕುಟುಂಬವೊಂದು ನೆಲೆಸಿರುವ ಬಗ್ಗೆ ಈ ಹಿಂದಿನ ವಿಡಿಯೋದಲ್ಲಿ ತಿಳಿಸಿದ್ವಿ. ಮೈಸೂರು ಕೃಷ್ಣಶಾಸ್ತ್ರಿಯವರು ಆಗ ಕಾಶಿ ಮಹಾರಾಜರ ಆರು ತಿಂಗಳು ಎತ್ತಿನ ಬಂಡಿಯಲ್ಲಿ ಪಯಣಿಸಿ ಕಾಶಿಗೆ ಹೋದರಂತೆ. ಕಾಲಘಟ್ಟ ಅವಲೋಕಿಸಿದರೆ ಅದು ಕಾಶಿಯ ಮೇಲೆ ಔರಂಗಜೇಬನ ಆಕ್ರಮಣ ಆಗಷ್ಟೇ ಮುಗಿದ ಸಮಯ. ಕೃಷ್ಣಶಾಸ್ತ್ರಿಯವರು ಬಹುಶಃ ಆಕ್ರಮಣ ನಂತರ ನಡೆದ ಎಲ್ಲ ಬೆಳವಣಿಗೆಗಳ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಹಾಗೆನೇ ಜ್ಞಾನವಾಪಿ ಬಾವಿಯಿಂದ ರಕ್ಷಿಸಲ್ಪಟ್ಟ ವಿಶ್ವನಾಥ ಲಿಂಗವನ್ನು ಹೊರತೆಗೆಸಿ ಇಂದೋರ್ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಪುನರ್ಪ್ರತಿಷ್ಠೆ ಮಾಡಿದ ಸಂಭ್ರಮಗಳಿಗೂ ಅವರ ನಂತರದ ತಲೆಮಾರು ಸಾಕ್ಷಿಯಾಗಿದ್ದರು. ಈಗ ಅವರ ವಂಶದ ಆರನೆ ತಲೆಮಾರಿನವರಾದ ಪ್ರಸನ್ನ ಕುಮಾರ ಶರ್ಮಾ ಹಾಗೂ ಕೇದಾರನಾಥ ಶರ್ಮಾ ಹಾಗೂ ಪರಿವಾರದವರು ಇತಿಹಾಸದ ಉತ್ಖನನ ಹಾಗೂ ಹೊಸ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದ್ದಾರೆ.
ಈಗ ಇದಕ್ಕೂ ಮೊದಲು ಕಾಶಿಯಲ್ಲಿ ಇರುವ ಕನ್ನಡದ ಶಿಲಾಶಾಸನ ಯಾವುದು ನೋಡೋಣ. ಅದು ಕನ್ನಡದ ಮಠ, ಔರಂಗಜೇಬನೇ ತಲೆಬಾಗಿ ಹಿಂದೆ ಸರಿಯುವಂತೆ ಮಾಡಿದ ಮಠ ಜಂಗಮವಾಡಿ ಮಠದಲ್ಲಿರುವ ಕನ್ನಡ ಶಾಸನ. ಈ ಜಂಗಮವಾಡಿ ಮಠ ವೀರಶೈವ ಪರಂಪರೆಯ ಮಠ.. ಕಾಶಿಯ ಅತಿ ಪ್ರಾಚೀನ ಮಠ ಅನ್ನೋ ಹೆಗ್ಗಳಿಕೆ ಈ ಮಠದ್ದು. ಇಲ್ಲಿ ಕನ್ನಡದ ಹಲವು ತಾಳೆಗರಿಗಳು, ಪ್ರಾಚೀನ ಗ್ರಂಥಗಳನ್ನು ಸಂರಕ್ಷಿಸಿ ಇಡಲಾಗಿದೆ. ಕನ್ನಡ ಶಾಸನ ವಿಷಯಕ್ಕೆ ಬಂದರೆ ಕೊಡಗಿನ ಕೊನೆಯ ಅರಸು ಚಿಕ್ಕವೀರರಾಜೇಂದ್ರ ಅವರ ಸಮಾಧಿ ಜಂಗಮವಾಡಿ ಮಠದ ಆವರಣದಲ್ಲಿದೆ. ಅವರ ರಾಣಿಯರಲ್ಲಿ ಒಬ್ಬರಾದ ನಂಜಮ್ಮಾಜಿ ಒಂದು ಶಾಸನ ಕೆತ್ತಿಸಿ ಗದ್ದುಗೆ ಗೋಡೆಗೆ ಅಳವಡಿಸಿದ್ದಾರೆ. ಈ ಶಾಸನದ ಪಾಠ ಹೀಗಿದೆ- ಹಾಲೇರಿ ಸಂಸ್ಥಾನದ ಕೊಡಗು ದೇಶದ ಮಹಾರಾಜ ಶ್ರೀ ವೀರರಾಜೇಂದ್ರ ಒಡೆಯರ್ ಅವರು ವಿಲಾಯತಿಯಲ್ಲಿ ಶಿವಾಧೀನರಾದರು.
ಇವರ ದೇಹವನ್ನು ಹಿಂದೂಸ್ತಾನದ ಕಾಶಿಕ್ಷೇತ್ರಕ್ಕೆ ತಂದು ಅವರ ಪಟ್ಟದ ರಾಣಿಯರಾದ ನಂಜಮ್ಮ ಮತ್ತು ಪುತ್ರರಾದ ಲಿಂಗರಾಜ ಒಡೆಯರ್, ಸೋಮಶೇಖರ ಒಡೆಯರ್, ವೀರಭದ್ರ ಒಡೆಯರ್, ನಂಜರಾಜ ಒಡೆಯರ್, ಪದ್ಮರಾಜ ಒಡೆಯರ್ ಎಲ್ಲರೂ ಕೂಡಿ ಸುಬೇದಾರ ಕೊಡಗು ಮಹಾವೀರ ಅಚ್ಚಯ್ಯನಿಗೆ ಅಪ್ಪಣೆ ಕೊಟ್ಟು ವೀರಶೈವ ಮಠ ಜಂಗಮವಾಡಿಯಲ್ಲಿ ಲಿಂಗಮುದ್ರೆ ಕಲ್ಲಿನೊಳಗೆ ಸಮಾಧಿ ಮಾಡಿ ಗದ್ದಿಗೆಯನ್ನು ಕಟ್ಟಿಸಿ ಕ್ರಿಸ್ತಶಕ ೧೮೬೨ನೆಯ ಸೆಪ್ಟೆಂಬರ್ ೧೨ನೆಯ ತಾರೀಕು ಲಿಂಗವನ್ನು ಪ್ರತಿಷ್ಠಾಪಿಸಿ ಆ ಲಿಂಗಕ್ಕೆ ಶ್ರೀ ವೀರೇಶ್ವರ ಅಂತ ಹೆಸರಿಟ್ಟರು. ಮೇಸ್ತ್ರಿ ಮೂಲಚಂದ್ ಇದನ್ನು ಕಟ್ಟಿದನು. ಸರ್ವಜನರು ತಿಳಿಯುವ ಉದ್ದಿಶ್ಯದಿಂದ ಇದನ್ನು ಬರೆಯಿಸಿದೆ.
ಇದು ಕಾಶಿಯಲ್ಲಿ ಈ ಮೊದಲು ಲಭ್ಯವಾಗಿದ್ದ ಕನ್ನಡ ಶಾಸನ. ಇತಿಹಾಸಜ್ಞರು ಉತ್ಖನನ ಮಾಡಿದರೆ ಹಲವು ಕನ್ನಡ ಶಾಸನಗಳು ದೊರಕಬಹುದು ಅಂತ ಹೇಳ್ತಾರೆ. ಸಧ್ಯಕ್ಕೆ ಇದಕ್ಕೂ ಹಳೆಯ ಉಲ್ಲೇಖವಾಗಿ ಜ್ಞಾನವಾಪಿ ಕಟ್ಟಡದ ಗೋಡೆಯ ಮೇಲೆ ಕಂಡುಬಂದ ʻದೊಡ್ಡರಸಯ್ಯ ಹಾಗೂ ನರಸಂಣ್ಣʼರು ಕಾಶಿಗೂ ಕನ್ನಡಕ್ಕೂ ಇರುವ ಸಂಬಂಧದ ದೊಡ್ಡ ಕೊಂಡಿಯೊಂದರ ಪ್ರತೀಕವಾಗಿರಬಹುದು.
ಕನ್ನಡ ಕರುನಾಡ ಇನ್ನೂ ಹಲವು ವಿಶೇಷತೆಗಳಿಗಾಗಿ ವೀಕ್ಷಿಸಿ ದೃಶ್ಯಕಾವ್ಯ ಕನ್ನಡ ಯುಟ್ಯೂಬ್ ವಾಹಿನಿ.









