ಭೀಷ್ಮನ ಸಾವು ನನ್ನ ಕೈಯಲ್ಲಿ
ಎನ್ನುವ ಪ್ರತಿಜ್ಞೆಗೈದವಳು
ಅವನು ನೋಡುತ್ತಿದ್ದಂತೆ
ಚಿತಾಗ್ನಿಯಲ್ಲಿ ಬೆಂದವಳು
ಅಲ್ಲಿಗೆ ಷೋಡಶಿ ರಾಜಕುಮಾರಿ ಅಂಬೆ
ಅಸ್ತಂಗತಳಾದಳು
ಒಮ್ಮೆ ಯೋಚಿಸಬೇಕಿತ್ತು ಅಂಬೆ
ಕೊನೆಗೂ ಹುಟ್ಟಿಬಂದೆ ಶಿಖಂಡಿಯಾಗಿ
ಪಿತಾಮಹ ಭೀಷ್ಮನಿಗೆ ಮುಖಾಮುಖಿಯಾಗಿ
ಕುರುಕ್ಷೇತ್ರ ಯುದ್ಧದ ಹತ್ತನೆಯ ದಿನ
ಶಸ್ತ್ರಾಸ್ತ್ರ ತ್ಯಜಿಸಿದ ಗಾಂಗೇಯ
ಮೈಯೊಡ್ಡಿದ ಪಾರ್ಥನ ಬಾಣಗಳಿಗೆ
ಉರುಳಿದ ಹಳೆಯ ಆಲದ ಮರದಂತೆ
ಅರ್ಜುನನಿಂದಲೇ ಶರಶಯ್ಯೆ ರಚನೆ
ವಿರಮಿಸಿದ ಉತ್ತರಾಯಣದ ನಿರೀಕ್ಷೆಯಲಿ
ಅಂಬೆ, ಪ್ರತಿಜ್ಞೆ ಶಿಖಂಡಿಯಲಿ ಈಡೇರಿದ ಆತ್ಮತೃಪ್ತಿ
ದೊರಕಿತೆ ಎರಡನೇ ಜನುಮದಲಿ?
ಆದರೂ ಒಮ್ಮೆ ಯೋಚಿಸಬೇಕಿತ್ತು ಅಂಬೆ
ಅಂಬೆ ನಿನಗೂ ಗೊತ್ತಿತ್ತು
ಭೀಷ್ಮ ಇಚ್ಛಾಮರಣಿ ಎಂದು
ಆಗಲೇ ಅವನಿಗೆ ಬದುಕು ಸಾಕು ಎನಿಸಿತ್ತು
ರಾಜಸಿಂಹಾಸನನಿಷ್ಠ, ವೀರ ಸೇನಾಧಿಪತಿ
ಒಬ್ಬ ಪಾಂಡವನನ್ನೂ ಮುಗಿಸಲಿಲ್ಲ ಯಾಕೆ?
ತನ್ನ ಯುಗ ಕೊನೆಗೊಳಿಸಲು ನೆವ ಕಾಯುತ್ತಿದ್ದ
ರಣರಂಗದಲಿ ನಿನ್ನ ಕಂಡವ ಘೋಷಿಸಿಯೇ ಬಿಟ್ಟಿದ್ದ ಯುದ್ಧಾಂತ್ಯ
ಧರ್ಮ-ನಿಷ್ಠೆಯಲ್ಲಿ ಅಚಲ ಅದಮ್ಯ
ತೊಟ್ಟಿಕ್ಕುವ ಪ್ರತಿ ನೆತ್ತರಿನ ಹನಿಯಲ್ಲಿಯೂ
ಕುರುಕುಲ ನಿಷ್ಠೆಗಾಗಿ ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ
ಬಾಣದ ಮೊನಚಿನ ಜೊತೆ ನಿನ್ನ ಹೆಪ್ಪುಗಟ್ಟಿದ ಕಣ್ಣೀರ ಕಣ ದೇಹವನ್ನು ಚುಚ್ಚುತ್ತಿರೆ
ಮನಸ್ಸನ್ನಾವರಿಸಿದ ವಿಷಾದಗಳೆಲ್ಲವೂ ಚಿತಾಗ್ನಿಯಂತೆ ಸುಡುತ್ತಿರೆ
ಕೊನೆಗೂ ಕೃಷ್ಣನ ವಿರಾಟ್ ದರ್ಶನ ಪಡೆದ ಸಂತೃಪ್ತಿಯಲಿ ಮಾಡಿದ ದೇಹತ್ಯಾಗ
ನಿನ್ನ ಹೆಗ್ಗಳಿಕೆ ಏನಿದೆ ಅಂಬೆ? ಒಮ್ಮೆ ಯೋಚಿಸಬೇಕಿತ್ತು
ಅಂಬೆ… ನಿನ್ನ ಪ್ರತಿಜ್ಞೆ ಪೂರ್ಣಗೊಂಡ ಸಂತೃಪ್ತಿ ನಿನಗೆ
ಆ ನಿನ್ನ ಬೀಗುವಿಕೆ ಸಹಜ ಕೂಡಾ
ಆದರೆ ನಿನ್ನಾಹುತಿಯ ಪೂರ್ವದಲಿ
ಒಳದನಿ ಎಚ್ಚರಿಸುತ್ತಲೇ ಇತ್ತಲ್ಲವೆ?
ನಿನ್ನ ಮೈ-ಮನ ತುಂಬಿದ ಸೇಡು, ಹಠ, ದ್ವೇಷ
ಎಲ್ಲದರೊಳಗೆ ಬಂಧಿಯಾದ ನೀನು ನಿನ್ನರಿವ ಮರೆತೆ
ಸಾಲ್ವ ನಿನ್ನಿಂದ ಪಡೆದದ್ದು ಮದುವೆಯಾಗುವ ಭಾಷೆ
ಅವನ ರಾಜಕೀಯ ಲೆಕ್ಕಾಚಾರ ನಿನಗರ್ಥವಾಗಲಿಲ್ಲ
ಪ್ರೀತಿಸುವನೆನ್ನುವ ಭ್ರಮೆ ಬಿಡಲಿಲ್ಲ
ಪರಶುರಾಮರು ನಿನ್ನ ಸಹಾಯಕ್ಕೆ ಧಾವಿಸಿದರೂ
ಪ್ರಯೋಜನ ಇರಲಿಲ್ಲ
ಗುರು-ಶಿಷ್ಯರ ಯುದ್ಧದ ತಾಲೀಮಷ್ಟೆ
ನಿನ್ನ ಸ್ವಯಂವರದಲ್ಲಿ
ಗೆದ್ದವ ಭೀಷ್ಮ
ಮಡದಿಯರ ಜೊತೆ ರಾಜ್ಯವಾಳಿದವ ಸಾಲ್ವ
ನಿನ್ನನ್ನೇನೂ ಧೇನಿಸುತ್ತ ಕುಳಿತಿರಲಿಲ್ಲ ಕೊನೆಯವರೆಗೂ
ನಿನ್ನಪ್ಪ, ಸಾಲ್ವ, ಭೀಷ್ಮ-ಹೀಗೆ ಎಲ್ಲರ ರಾಜಕೀಯ ಪಗಡೆಯಾಟದಲಿ
ದಾಳವಾದವಳು ನೀನು ಅದೂ ನಿನ್ನಿಂದಲೇ
ಹೇಳು ಅಂಬೆ
ಗೆದ್ದೆನೆಂದು ಬೀಗುತ್ತಿರುವ ನೀನು ಬದುಕಿನಲಿ ಸೋತೆ
ಅನುಭವಿಸಬೇಕಾದ ಎಲ್ಲ ಸುಖಗಳಿಗೆ ಬೆಂಕಿ ಇಟ್ಟೆ
ದ್ವೇಷದ ಕಿಚ್ಚಿನ ದಳ್ಳುರಿಯಲ್ಲಿ ನೀನೇ ಕರಕಲಾದೆ
ಒಮ್ಮೆ ಯೋಚಿಸಬೇಕಿತ್ತು ಅಂಬೆ
ಸತ್ತು ಸಾಧಿಸಿದ್ದಾದರೂ ಏನು ?
ಶಿಖಂಡಿಯಾಗಿ ಹುಟ್ಟಿ ಸಾಧಿಸಿದ್ದಾದರೂ ಏನು?
ಮುಗಿಯಲಿಲ್ಲ ಇಲ್ಲಿಗೆ ನಿನ್ನ ಪಯಣ
ದ್ವೇಷ-ಹಠಗಳ ಅಂಬೆ ಈಗಲೂ ಜೀವಂತ
ಬರುತ್ತಲೇ ಇರುವೆ
ತಮ್ಮ ಬದುಕು- ಭವಿಷ್ಯಗಳನ್ನು ಬೆಂಕಿಗೆ ದೂಡುವ
ಕಿಶೋರಿಯರ ಹುಂಬತನದಲ್ಲಿ
* ವನಜಾ ಕೊಳಗಿ








