“ಸ್ವಾಮಿಯೇ ಅಯ್ಯ ಶರಣಂ ಅಯ್ಯಪ್ಪ ” ಎನ್ನುವ ಭಕ್ತರು ಅಯ್ಯಪ್ಪನನ್ನು ನೆನೆದು ಹಾಡು ಹೇಳುತ್ತಿರುವಂತಹ ದೃಶ್ಯ. ಅಯ್ಯಪ್ಪ ಸ್ವಾಮಿಯ ಹಾಡನ್ನು ಕೇಳಿದರೆ ಅದನ್ನು ಪದೇ-ಪದೇ ಕೇಳಬೇಕು ಎಂಬ ಹಂಬಲ, ಹಾಗೇ ಭಕ್ತಿಯಲ್ಲಿ ಲೀನವಾಗುವುದು ಆ ಹಾಡಿನಲ್ಲಿ ಇರುವಂತಹ ಶಕ್ತಿಯೇ ಆಗಿದೆ. ಇದು ಶಿವಪುರ ಗ್ರಾಮದಲ್ಲಿ ಶಬರಿಮಲೆಗೆ ಹೋಗುವ ಭಕ್ತಾದಿಗಳು ಮಾಲೆ ಹಾಕಿ ಪೂಜೆ -ಪುನಸ್ಕಾರಗಳು ಮತ್ತು ಭಜನೆಗಳನ್ನು ಮಾಡುವಂತದ್ದಾಗಿದೆ. ಇಂತಹ ಪೂಜೆಯಲ್ಲಿ ನನ್ನ ಚಿಕ್ಕಪ್ಪ ರಮೇಶ ಅವರು ಮಾಲೆ ಹಾಕಿದ್ದರು. ಆದ ಕಾರಣ ನಾನು, ನಮ್ಮ ಅಜ್ಜಿ ಸಾವಿತ್ರಿ ಮತ್ತು ಚಿಕ್ಕಮ್ಮ ಜಯಶೀಲಾ ಅಲ್ಲಿಗೆ ಹೋಗಿದ್ದೆವು. ನನಗೆ ಆಗ 5 ವರ್ಷ, ಚಿಕ್ಕ ಹುಡುಗಿ. ಹೀಗೆ ಪೂಜೆ -ಪುನಸ್ಕಾರ ಮಾಡುವ ಸ್ಥಳದ ಪಕ್ಕದಲ್ಲಿ ಒಂದು ಸಣ್ಣ ತಿಂಡಿ ಅಂಗಡಿ ನನ್ನ ಕಣ್ಣಿಗೆ ಬಿತ್ತು. ಎಲ್ಲಾ ಪೂಜೆ, ಭಜನೆ ಮಾಡ್ತಾ ಇರುವ ಸಂಧರ್ಭದಲ್ಲಿ ಒಂದು ಹುಡುಗಿ ನನ್ನ ಹತ್ತಿರ ಬಂದಳು. ಅವಳು ಮೊದಲಿಗೆ ತನ್ನ ಪರಿಚಯ ಮಾಡಿಕೊಂಡಳು. ಆ ಹುಡುಗಿ ಹೆಸರು ತೇಜು.
ತೇಜು ಇಲ್ಲಿ ಇವರು ಪೂಜೆ ಮಾಡಲಿ, ಅದೋ ಅಲ್ಲಿದೆಯೆಲ್ಲಾ ಅದೇ ನಮ್ಮನೆ. ಅಲ್ಲೇ ಆಟ ಆಡೋಣ ಬಾ ಎಂದು ಕರೆದಳು.
ಮೊದಲು ಅಂಗಡಿ ವಿಷಯ ಹೇಳಿದನ್ನೆಲ್ಲಾ ಅದೇ ಆ ತೇಜು ಮನೆ ಆಗಿತ್ತು. ನನಗೆ ಆ ಪಕ್ಕದಲ್ಲಿರುವ ಅಂಗಡಿಯ ಮೇಲೆ ಕಣ್ಣು ಜಾಸ್ತಿ ಇತ್ತು. ಯಾವಾಗಾದರೂ ಆ ಅಂಗಡಿಗೆ ಹೋಗ್ತೀನೋ ಅನ್ನುವಷ್ಟು ತರಾತುರಿ ನನ್ನಲ್ಲಿತ್ತು.ನನಗೆ ಅವಳು ಕರೆದ ತಕ್ಷಣ ಮನಸಿನಲ್ಲಿಯೇ ಖುಷಿ ಆಯ್ತು. ನನಗೂ ಅದೇ ಬೇಕಾಗಿತ್ತು. ಹಾಗೂ ಹೀಗೂ ಮಾಡಿ ನಮ್ಮಜ್ಜಿಯನ್ನು ಒಪ್ಪಿಸಿ ಅವಳ ಮನೆಗೆ ಹೋದ್ವಿ.
ಅಲ್ಲಿ ಅವಳ ಅಮ್ಮ ಅಂಗಡಿಯಲ್ಲೇ ಇದ್ದರು. ಅವರು ಕೂಡಾ ನಾವು ಚಿಕ್ಕ ಮಕ್ಕಳೆಲ್ಲಾ ಎಂದು ಮೊದಲು ಮುದ್ದು ಮಾಡಿ, ಅಲ್ಲೇ ಅವರ ಮುಂದೆ ಇದ್ದ ಗ್ಲಾಸಿನಲ್ಲಿ ಚಾಕಲೇಟ್ ಡಬ್ಬಿಯನ್ನು ತೆರೆದರು. ಆಗ ನನ್ನ ಮನಸ್ಸಿಗೆ ಅಪ್ಪ ದೇವರೇ ಜಾಸ್ತಿ ಚಾಕುಲೇಟ್ ಕೊಡೋ ಹಾಗೇ ಮಾಡು ಎಂದು ಮನಸ್ಸಿನಲ್ಲಿಯೇ ಆಸೆಯ ಭಾರವನ್ನು ದೇವರಿಗೆ ಹೇರಿ ಬಿಟ್ಟೆ. ಅವರು ನಮ್ಮಬ್ಬರಿಗೂ ಎರೆಡೆರಡು ಚಾಕುಲೇಟ್ ಕೊಟ್ಟು, ಆಡಿಕೊಳ್ಳಿ ಹೋಗಿ ಮಕ್ಕಳೇ ಎಂದು ಅವರು ಮನೆಯೊಳಗೆ ಕಳಿಸಿ ಬಿಟ್ಟರು.
ಆಗ ನನ್ನ ಜಾಸ್ತಿ ಬೇಕು ಅನ್ನೋ ಚಾಕುಲೇಟ್ ಆಸೆ ಅಲ್ಲಿಗೆ ನೀರಾಯಿತು. ಅವರು ಕೊಟ್ಟಂತಹ ಚಾಕುಲೇಟ್ ಹೆಸರು ‘ ಗೋಲ್ಡ್ ‘. ಅದರ ಚಾಕುಲೇಟ್ ಮೇಲಿನ ಕವರ್ ಗೋಲ್ಡ್ ಕಲರ್ನಲ್ಲೇ ಇರುತ್ತದೆ ಅದರೊಳಗೆ ಚಾಕಲೇಟ್ ಪ್ಲೇವರ ಅದರೊಳಗೆ ಹಾಲಿನ ಪ್ಲೇವರ ಕ್ರೀಮ್ ಇರುತ್ತದೆ. ಅದು ಬಾಯಲ್ಲಿ ಇಟ್ಟು ಕೂಡಲೇ ಕರಗಿಹೋಗಿಬಿಡುತ್ತಿತ್ತು. ಅವರು ಕೊಟ್ಟಂತಹ ಎರೆಡು ಚಾಕಲೇಟ್ ನನ್ನ ಬಾಯಿಯ ತುಡಿತದ ಅಬ್ಬರಕ್ಕೆ ತಡವಿಲ್ಲದೆ ನುಜ್ಜು -ಗುಜ್ಜಾಗಿ ಹೋಯಿತು. ನಾನು ತೇಜು ಅವರ ಮನೆಯ ಜಗಲಿಯಲ್ಲಿ ಚೌಕಬಾರ, ಕಣ್ಣು ಕಟ್ಟಿ ಆಟ ಆಡಿದೆವು. ಮನಸ್ಸಿಗೆ ಬಂದಂತೆ ಎಲ್ಲ ಆಟ ಆಡಿದ್ವಿ. ಆದರೂ ನನ್ನ ಮನಸ್ಸಿನಲ್ಲಿ ಪದೇ-ಪದೇ ಆ ಗೋಲ್ಡ್ ಚಾಕುಲೇಟ್ ನೆನಪಾಗ್ತಾ ಇತ್ತು, ಹಾಗೇ ತಿನ್ನಬೇಕು ಅನ್ನಿಸೋದು ಅದರಲ್ಲೂ ನನ್ನ ಹತ್ತಿರ ದುಡ್ಡು ಇರ್ಲಿಲ್ಲ. ಹೇಗೆ ಅವರ ಹತ್ತಿರ ಕೇಳೋದು ಅಂತ ಗೊತ್ತಾಗಲಿಲ್ಲ. ಒಂದು ಸಲ ಫ್ರೀ ಆಗಿ ಕೊಟ್ರು ಅಂತ ಪ್ರತಿ ಸಲ ಯಾರು ಕೊಡಲ್ಲ. ಅದು ಅಲ್ಲದೇ ಅವರು ವ್ಯಾಪಾರಕ್ಕಾಗಿನೇ ಅಂಗಡಿ ಇಟ್ಟುಕೊಂಡಿರೋದು. ಅದಕ್ಕೆ ನಾನು ಅವಳ ಹತ್ತಿರ ಹೋಗಿ ತೇಜು ನಾನು ನಮ್ಮ ಅಜ್ಜಿ ಹತ್ತಿರ ಹೋಗಿ ಬರ್ತೀನಿ ಎಂದು ಹೇಳಿ ಬಂದೆ. ಅಷ್ಟೋತ್ತಿಗೆ ಪೂಜೆ ಮಾಡುವ ಸ್ಥಳದಲ್ಲಿ ಭೋಜನ ಕಾರ್ಯಕ್ರಮ ಶುರುಮಾಡಿದರು. ಅಲ್ಲಿ ಊಟ ಮಾಡಿ ನಾವೆಲ್ಲ ಕುಳಿತಿರುವಾಗ ಅಜ್ಜಿಯ ಹತ್ತಿರ ಬಂದು,
ನಾನು :ಅಜ್ಜಿ ಪ್ಲೀಸ್ ಒಂದು ರೂಪಾಯಿ ಕೊಡು, ನಾನು ಚಾಕಲೇಟ್ ತಗೋಬೇಕು (ಎಂದು ಪುಸಲಾಯಿಸುತ್ತ ಕೇಳಿದೆ.)
ಸಾವಿತ್ರಿ :ಏ!. ಚಾಕುಲೇಟ್ ಎಲ್ಲಾ ತಿನ್ನಬಾರದು ಮಗ, ಹಲ್ಲಲ್ಲಿ ಹುಳ ಆಗಿಬಿಡ್ತದೆ. ನಾವು ಇಲ್ಲಿಗೆ ಯಾಕೆ ಬಂದಿದ್ದು ಹೇಳು?, ಪೂಜೆ ಮಾಡೋಕೆ ಅಲ್ವಾ, ಇಲ್ಲೇ ಸುಮ್ನೆ ಇರು ಇಲ್ಲಾಂದ್ರೆ ದೇವ್ರು ಶಾಪ
ಕೊಡತಾನೆ ಎಂದು ಹೇಳುತ್ತಾಳೆ.
ನಾನು : ಅಜ್ಜಿ ಇವಾಗ ಊಟ ಮಾಡೋ ಸಮಯ ಅದಿಕ್ಕೆ ದೇವ್ರು ಊಟಕ್ಕೆ ಹೋಗಿರುತ್ತೆ. ಅದು ವಾಪಸ್ಸು ವಾಪಸ್ಸು ಬರುವಷ್ಟರಲ್ಲಿ ನಾನ್ ಹೋಗಿ ಬರ್ತೀನಿ ಅಂದೆ.
ಸಾವಿತ್ರಿ :ಹಾಂ! ಆಹಾ ಆಹಾ, (ಎಂದು ಜೋರಾಗಿ ನಕ್ಕಿದ್ರು ) ನಿನ್ನ ತಲೆ, (ಎಂದು ತಲೆ ಮೇಲೆ ಮುಟ್ಟಿದರೂ ತಾಕದೆ ಹಾಗೇ ನನ್ನ ತಲೆಯನ್ನು ಅಲ್ಲಾಡಿಸಿದರು.)
ನಾನು ಬಿಡುವ ಹಾಗೇ ಕಾಣಸಲಿಲ್ಲಾ ಅವರಿಗೆ ಅನಿಸಿತು. ಅಜ್ಜಿ ದುಡ್ಡು ಕೊಟ್ಟು ‘ಇದೇ ಕೊನೆ ಬಾರಿ ಮತ್ತೆ ಮತ್ತೆ ಬಂದು ಕೇಳುವ ಹಾಗಿಲ್ಲ, ಇಲ್ಲಾಂದ್ರೆ ನಿಮ್ಮ ಅಪ್ಪಂಗೆ ಹೇಳಿ ಹೊಡಿಸ್ತಿನಿ’ ಎಂದರು. ಅದಕ್ಕೆ ಇಲ್ಲ ಅಜ್ಜಿ ಇದೇ ಲಾಸ್ಟ ಮತ್ತೆ ಕೇಳಲ್ಲ ಎಂದು ಪುಸಲಾಯಿಸಿ, ಅವರ ಹತ್ತಿರ ದುಡ್ಡು ತೆಗೆದುಕೊಂಡು ಖುಷಿಯಿಂದ ಅಂಗಡಿಗೆ ಓಡಿ ಹೋದೆ.
ಅದು ಕೂಡಾ ನನ್ನ ಬಾಯಲ್ಲಿ ತಡವಿಲ್ಲದೆ ಉಳಿಯಲ್ಲೇ ಇಲ್ಲ. ಮತ್ತೇ ಕೇಳೋಣ ಅಂದುಕೊಂಡೆ, ಅಜ್ಜಿ ಹತ್ತಿರ ತಕ್ಷಣ ಅವಳು ಹೇಳಿದ್ದು ನನಗೆ ನೆನಪಾಯ್ತು. ಅಯ್ಯೋ ಅಪ್ಪ ಎಂಬ ಭಯ ಶುರುವಾಯಿತು. ಅಷ್ಟರಲ್ಲಿ ಅಪ್ಪನೂ ಕೂಡಾ ಪೂಜೆ ನಡೆಯುವ ಸ್ಥಳದಲ್ಲಿ ಪ್ರತ್ಯಕ್ಷ. ನನ್ನನ್ನ ಅಂಗಡಿ ಬಳಿ ಹೋಗಿದ್ದು ಬಯ್ಯುತ್ತಾರೆಂದು, ಹುಷಾರಿಯಿಂದ ನಾನು ಅವರಿಗೆ ಕಾಣದ ಹಾಗೇ ಅಜ್ಜಿಯ ಬಳಿ ಸೇರಿಕೊಂಡೆ. ಅದರಲ್ಲೂ ಜನರ ಸಮೂಹ ಜಾಸ್ತಿ ಇತ್ತು. ನಾನು ಹೋಗಿದ್ದು ಅವರಿಗೆ ಕಣ್ಣಿಗೆ ಬೀಳಲಿಲ್ಲ ಅಲ್ಲಿಯ ಪೂಜೆ ಮುಗಿಸಿ ನಮ್ಮ ಚಿಕ್ಕಪ್ಪನು ಮಾಲೆ ಹಾಕಿರೋದರಿಂದ ಅವರ ಹೋಗುವವರಿಗೂ ಅಲ್ಲೇ ಇದ್ದು ಮತ್ತೇ ತಿರುಗಿ ಮನೆಗೆ ಬಂದೆವು.
ಹಾಗೇ ಮನೆಗೆ ಬಂದ ಕೂಡಲೇ ನಮ್ಮ ಮನೆಯ ಮುಂದೆ ಇರುವ ಕೊಟ್ಟಿಗೆಯ ದನಗಳು ಕೂಗಲು ಶುರುಮಾಡಿದವು. ಅವರ ಕೈಯಲ್ಲಿದ್ದ ಹಣ್ಣು, ಕಾಯಿ ಪೂಜೆ ಮಾಡಿಸಿದಂತಹ ಚೀಲವನ್ನು ಚಿಕ್ಕಮ್ಮನ ಕೈಗೆ ಕೊಟ್ಟರು. ಅಷ್ಟೋತ್ತಿಗೆ ನಮ್ಮನೆ ಆಕಳು ಹಗ್ಗದ ಕಣ್ಣಿಯನ್ನು ಬಿಡಿಸಿಕೊಂಡು ಒಡಲಿಕ್ಕೆ ಶುರುಮಾಡಿದೆವು. ಅದಕ್ಕೆ ನನ್ನ ಚಿಕ್ಕಮ್ಮ ಹತ್ತಿರ ಬಂದು,
ಜಯಶೀಲಾ : ಮಗಾ! ನೀನು ಒಳಗೆ ಹೋಗು ನಾನು ಆಕಳನ್ನು ಕಟ್ಟಿ ಬರ್ತೀನಿ ಎಂದು ಹೇಳಿದಳು.
ಹಾಗೆ ನಾನು ಚೀಲವನ್ನು ತೆಗೆದುಕೊಂಡು ಬಂದು, ಮನೆಯ ಜಗಲಿಯ ಒಳಗೆ ಕುಳಿತೆ. ಅಲ್ಲೇ ಪಕ್ಕದಲ್ಲಿ ಮಂಚದ ಮೇಲೆ ಅಕ್ಕ ಜ್ವರ ಎಂದು ಮಲಗಿದ್ದಳು. ಅವಳಿಗೆ ನನ್ನ ಕೈಯಲ್ಲಿದ್ದ ಹಚ್ಚಿಕೊಳ್ಳಲು ಕುಂಕುಮ ಮತ್ತು ತಿನ್ನಲು ಪ್ರಸಾದ ಕೊಟ್ಟೆ. ಅನಂತರ ಆ ಚೀಲದಲ್ಲಿ ಒಂದು 50ಪೈಸೆ ನಾಣ್ಯ ನನ್ನ ಕಣ್ಣಿಗೆ ಬಿತ್ತು ಪ್ರಸಾದವನ್ನು ಕೊಡುವಾಗ. ಹಾಗೇ ಅದನ್ನು ತೆಗೆದುಕೊಂಡು ಖುಷಿಯಿಂದ ಕುರ್ಚಿಯಲ್ಲಿ ಕುಳಿತುಕೊಂಡೆ. ನಾನು ಅಲ್ಲಿಗೆ ಹೋದಾಗ ಅಂಗಡಿಯಲ್ಲಿ ಚಾಕಲೇಟ್ ತಿಂದ ವಿಷಯವನ್ನು ನಮ್ಮ ಅಕ್ಕನ ಬಳಿ ವ್ಯಂಗ್ಯವಾಗಿ ಹೇಳ್ತೀನಿ. ಆ ವಯಸ್ಸಿನಲ್ಲಿ ನಾನು ಮಾಡಿದ ವಿಷಯ ಅಥವಾ ತಿಂದ ವಸ್ತುಗಳ ಬಗ್ಗೆ, ನಮ್ಮ ಸಹೋದರ -ಸಹೋದರಿಯರಿಗೆ ಹಾಗೇ ಫ್ರೆಂಡ್ಸ್ಗಳಿಗೆ ವ್ಯಂಗ್ಯ ಮಾಡಿ ಹೇಳುವುದು ಒಂದು ಛಟನೇ ಅಂತ ಹೇಳಬಹುದು.
ನಮ್ಮ ಮನೆಯಲ್ಲಿ ಮೊದಲಿಗೆ ಒಂದು ಡಿ.ವಿ.ಡಿ ಇತ್ತು. ಅದಕ್ಕೆ ಕ್ಯಾಸೆಟ್ ಹಾಕಿ ನಾಟಕ ಸಿನೆಮಾಗಳನ್ನು ಮನೆ ಮಂದಿಯೆಲ್ಲಾ ನೋಡ್ತಾ ಇದ್ವಿ. ಅದು ನಾನು ಅವಳಿಗೆ ತಿಂದ ಬಗ್ಗೆ ಹೇಳಿ ಕುಳಿತಾಗ, ಅದು ನನ್ನ ಕಣ್ಣಿಗೆ ಬಿತ್ತು. ಅದರಲ್ಲಿ ಒಂದು ಬಟನ್ ಒತ್ತಿದ ಕೂಡಲೇ ಕ್ಯಾಸೆಟ್ ಹಾಕುವಂತಹ ಸ್ಥಳದ ಭಾಗ ಹೊರಗೆ ಬರುತ್ತದೆ. ಅಲ್ಲಿ ಕ್ಯಾಸೆಟ್ ಹಾಕಿದರೆ ಸಿನಿಮಾ ಬರುತ್ತದೆ. ಅದೇ ನನ್ನ ಹತ್ತಿರ 50 ಪೈಸೆ ನಾಣ್ಯ ಇದೆ. ಇದನ್ನು ಹಾಕಿದರೆ ಏನು ಬರುತ್ತದೆ ಎಂದು ಆ ಬಟನ್ ಒತ್ತಿದೆ. ಅದು ಹೊರಗೆ ಬಂತು, ನನ್ನ ಬ್ರಹ್ಮಾಸ್ತ್ರ 50 ಪೈಸೆ ನಾಣ್ಯ ಹಾಕಿಬಿಟ್ಟೆ. ಅದು ಅಲ್ಲದೇ ಮೊದಲ ಬಾರಿಗೆ ಒತ್ತಿದಾಗ ಒಳಗೆ ಹೋಗಿ ಮತ್ತೊಮ್ಮೆ ಬಟನ್ ಒತ್ತಿದಾಗ ಹೊರಗೆ ಬಂತು. ಆದರೆ ಯಾಕೆ ಇನ್ನು ವೀಡಿಯೋಗಳು ಬಂದಿಲ್ಲ, ಎಂದು ಮತ್ತೊಮ್ಮೆ ಬಟನ್ ಒತ್ತಿ ಅದನ್ನು ತೆಗೆದು ನೋಡಲು ಹೋದಾಗ ಅದು ವಾಪಸ್ಸು ಹೊರಗೆ ಬರಲೇ ಇಲ್ಲ. ಇದನ್ನ ಸೂಕ್ಷ್ಮವಾಗಿ ನೋಡುತ್ತಿದ್ದ ನಮ್ಮ ಅಕ್ಕ. ಆಹಾ! ಆಹಾ! ಇರು ದೀಕ್ಷಾ ನಿನಗೆ ಅಪ್ಪನ ಹತ್ತಿರ ಹೇಳಿ, ಹೊಡಿಸ್ತಿನಿ ಎಂದು ನಗಾಡುತ್ತಾಳೆ. ಹಾಳು ಮಾಡಿದ್ಯಲಾ ಡಿ.ವಿ.ಡಿನಾ ಇರು ಅಪ್ಪ ಬರಲಿ ಸರಿ ನಿನಗೆ ಮಹಾಮಂಗಳಾರತಿ ಪೂಜೆ ಮಾಡಿಸುವ ಎಂದು ಪದೇ ನಮ್ಮನ್ನು ಭಯ ಬೀಳಿಸ್ತಾ ಇದ್ದಳು. ಅದು ಅಲ್ಲದೆ ಅಪ್ಪ ಬಂದು ಇದನ್ನೆಲ್ಲಾ ನೋಡಿ, ತಟ್ಟನೆ ಕೋಲನ್ನು ಮುರಿದುಕೊಂಡು ಎಂದು ಹೊಡೆದರು, ಎಂಬುವಂತಹ ಕನಸು ನನಗೆ ನಿಂತ ಸ್ಥಳದಲ್ಲೇ ತಲೆ ಸುಸ್ತು ಮಾಡಿತು. ಇನ್ನೂ ಇಲ್ಲೇ ಇದ್ದರೆ ಬೀಳುವಂತದ್ದು ಗ್ಯಾರಂಟಿ ಅಂದುಕೊಂಡು ನಮ್ಮ ಮನೆ ಹಿಂದಿರುವ ಕಾಡಿಗೆ ಪಲಾಯನ ಮಾಡಿದೆ. ಅಲ್ಲೇ ಸ್ವಲ್ಪ ಹೊತ್ತು, ಅಂದರೆ ಕಣ್ಣಿಗೆ ಸಣ್ಣದಾಗಿ ಕಪ್ಪು ಬೀಳುವ ಹೊತ್ತಿನಲ್ಲಿ ನಮ್ಮ ಅತ್ತೆ ಮನೆ ಇತ್ತು ಅಲ್ಲೇ ನಿಧಾನವಾಗಿ ಅವರ ಮನೆಯೊಳಗೆ ಹೋದೆ. ಹೀಗೆ ಮನೆಯಲ್ಲಿ ಇಲ್ಲವಾದರೆ, ಪಕ್ಕ ಅವಳು ಅತ್ತೆ ಮನೆಗೆ ಹೋಗಿರುವಂತದ್ದು ಖಾತರಿಯಾಗಿತ್ತು. ನಮ್ಮ ಮನೆಯವರಿಗೆಲ್ಲಾ ಬೆಳಿಗ್ಗೆ ಆದರೂ ನನ್ನಲ್ಲಿ ಆ ಭಯ ಹೋಗಲೇ ಇಲ್ಲ. ಹಾಗೇ ರಾತ್ರಿ ಕನಸಲ್ಲಿ ಅಪ್ಪ ಹೊಡೆಯೋ ದೃಶ್ಯ ನನ್ನ ಕಾಡುತ್ತಿತ್ತು. ಅಪ್ಪ ಬೆಳಿಗ್ಗೆ ಗದ್ದೆ ಹೋಗುವವರಿಗೂ ನಾನು ಮನೆಗೆ ಹೋಗಲೇ ಇಲ್ಲ. ಹಾಗೂ ಹೀಗೂ ಮಾಡಿ ಅವರು ಮನೆ ಬಿಟ್ಟು ಮೇಲೆ ನಾನು ನನ್ನ ಮನೆ ಸೇರಿಕೊಂಡೆ.
ಮನೆಗೆ ಬಂದು ಕೂಡಲೇ ಮನೆಯ ಹೆಂಗಸರಿಂದ ನನಗೆ ಸುಪ್ರಭಾತದ ನಾದ ಮೊಳಗುತ್ತಿತ್ತು. ಹಾಗೇ ಅಪ್ಪ ಮಧ್ಯಾಹ್ನದ ಊಟಕ್ಕೆ ಮನೆಗೆ ಬರುತ್ತಾರೆ. ಆಗ ನನಗೆ ಇನ್ನೂ ಭಯ ಎತ್ತಿ ಎತ್ತಿ ಹೊಡೆಯುತ್ತಿತ್ತು. ಅಪ್ಪ ಒಳಗೆ ಬಂದರು. ಅವರು ನನಗೆ ನೀರು ತೆಗೆದುಕೊಂಡು ಬಾ, ಎಂದು ಒಳಗೆ ಕರೆದರು. ನಾನು ಆಗ ಅಂದುಕೊಂಡೆ ಈಗ ಅಪ್ಪ ಕೋಲು ಮುರಿದುಕೊಂಡು ಬರಲಿಕ್ಕೆ ನನ್ನನ್ನ ನೀರು ತರಲಿಕ್ಕೆ ಕಳಿಸಿದರು ಅಂತ ಮನಸ್ಸಿನಲ್ಲಿಯೇ ಅಂದುಕೊಂಡೆ. ಹೇಗೆ ಆದರೂ ನನಗೆ ಬೀಳುವುದಂತೂ ಪಕ್ಕಾ ಅಂದುಕೊಂಡೆ. ಧೈರ್ಯ ಮಾಡಿ ಅವರಿಗೆ ನೀರು ಕೊಡಲು ಹೋದೆ. ಕಣ್ಣು ಮುಚ್ಚಿಕೊಂಡು ಅವರಿಗೆ ನೀರು ಕೊಟ್ಟೆ. ಅವರು ಯಾಕೆ ಕಣ್ಣು ಮುಚ್ಚಿಕೊಂಡಿದ್ಯಾ?, ಕಣ್ಣಿಗೆ ಏನಾದ್ರು ಬಿತ್ತಾ ಎಂದು ಕೇಳಿದರು. ಅನಂತರ ಅವರೇ ಕೇಳ್ತಾರೆ ಡಿ.ವಿ.ಡಿ ಹಾಳು ಮಾಡಿದ್ಯಾ ಅಂತ ಕಣ್ಣು ಮುಚ್ಚಿಕೊಂಡಿದ್ಯ ಎಂದು ಕೇಳಿದ್ರು. ಆಗ ನಂಗೆ ಇನ್ನೂ ಮಾತೆ ಬರದೇ ಇರುವಷ್ಟು ಭಯ ಹಾಗೇ ನಾನ್ ಹಾಕೊಂಡಿರುವ ಬಟ್ಟೆಯನ್ನ ಗಟ್ಟಿಯಾಗಿ ಹಿಡಿದುಕೊಂಡು ನಡಗುತ್ತಿದ್ದೆ. ಭಯ ಪಡಬೇಡ ದೀಕ್ಷಾ ನಾನು ಏನು ಮಾಡುವುದಿಲ್ಲ.ಆರಾಮಾಗಿ ಇರು, ಇನ್ಮುಂದೆ ಹಾಗೇ ಮಾಡ್ಬೇಡ ಎಂದು ಬುದ್ದಿವಾದ ಹೇಳಿದರು.
ಈ ಒಂದು ಘಟನೆ ನನಗೆ ಈಗಲೂ ನೆನಪಾದ್ರೆ ನಗು ಬರುತ್ತೆ. ಹಾಗೇ ನಾನು ಯಾರಿಗೆ ಭಯ ಬಿದ್ದು ಅತ್ತೆ ಮನೆಗೆ ಹೋಗಿದ್ನೋ, ಅವರು ನನಗೆ ಯಾವುದೇ ರೀತಿ ಬೈಯ್ಯಲಿಲ್ಲ ಹಾಗೇ ಹೊಡೆಯಲಿಲ್ಲ. ಸುಮ್ಮನೆ ಅಡಗಿಕೊಂಡಿದ್ದು ಆಯ್ತು ಅಂತ ಮನಸ್ಸಿನಲ್ಲಿಯೇ ಎಂದು ಮುಗುಳುನಗೆ ಬರುತ್ತದೆ. ಜಗತ್ತಿನಲ್ಲಿ ನಮ್ಮವರು ಅಂದರೆ ನಮ್ಮ ತಂದೆ ತಾಯಿಗಳೇ ಆಗಿರುತ್ತಾರೆ. ಬೇರೆ ಯಾರಾದ್ರೂ ಆದ್ರೆ ನಮ್ಮ ತಪ್ಪುಗಳನ್ನು ಖಂಡಿತ ಕ್ಷಮಿಸುವುದಿಲ್ಲ.ತಂದೆ ತಾಯಿಗಳು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಕ್ಕಳನ್ನು ಪ್ರೀತಿಸುತ್ತಾರೆ.
ದೀಕ್ಷಿತಾ ನಾಯ್ಕ್
B.A 5th sem
ಪತ್ರಿಕೋದ್ಯಮ ವಿಭಾಗ
ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಶಿರಸಿ









